ಬೆಂಗಳೂರು: ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯಿಂದ ಹೊರಬಂದು ‘ನ್ಯೂ ಕಬಡ್ಡಿ ಫೆಡರೇಷನ್’ ಸಂಸ್ಥೆ ಸ್ಥಾಪಿಸಿರುವ ಪದಾಧಿಕಾರಿಗಳು ಹಾಗೂ ಕಬಡ್ಡಿ ತಂಡಗಳನ್ನು ಅಮಾನತು ಮಾಡಲಾಗಿದೆ.
ಈ ವಿಷಯವನ್ನು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಮ್.ಶ್ರೀಕಾಂತ್ ತಿಳಿಸಿದರು.
‘50 ವರ್ಷಗಳಿಂದ ಕಬಡ್ಡಿ ಬೆಳವಣಿಗೆಗಾಗಿ ನಮ್ಮ ಸಂಸ್ಥೆ ಕೆಲಸ ಮಾಡಿದೆ. ಇಲ್ಲಿ ಸಾಕಷ್ಟು ಕ್ರೀಡಾಪಟುಗಳು ಬೆಳೆದಿದ್ದಾರೆ. ಆದರೆ ಕೆಲವರು ಮಾತ್ರ ಹೊಸ ಫೆಡರೇಷನ್ ನಿರ್ಮಿಸಿಕೊಂಡು ಅಸೋಸಿಯೇಷನ್ ವಿರೋಧಿ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಹಿರಿಯ ಕಬಡ್ಡಿ ಆಟಗಾರ ಸಿ.ಹೊನ್ನಪ್ಪ ಗೌಡ ಅವರನ್ನು ಸೇರಿದಂತೆ ಅಧಿಕಾರಿಗಳಾದ ಈಶ್ವರ್ ಅಂಗಡಿ, ಎಸ್.ಕೆ.ಮಂಜುನಾಥ್, ಮಹಮ್ಮದ್ ಇಸ್ಮಾಯಿಲ್, ಕೆ.ಎ.ಲಕ್ಷ್ಮೀನಾರಾಯಣ, ರಾಮಚಂದ್ರ, ಚಂದ್ರ ಶೇಖರ್, ಅನಿಲ್ ಹೊಸಮನಿ ಅವರನ್ನು ಹಾಗೂ ಬಾಗಲಕೋಟೆ, ಬಿಎಮ್ಟಿಸಿ, ಬೆಂಗಳೂರು ಮಾರುತಿ, ಬಸವನಗುಡಿ ಕಬಡ್ಡಿ ಕ್ಲಬ್ ತಂಡಗಳನ್ನು ಅಮಾನತು ಮಾಡಲಾಗಿದೆ’ ಎಂದು ಅವರು ತಿಳಿಸಿದರು.
‘ಹೊಸ ಫೆಡರೇಷನ್ ಹೆಸರಲ್ಲಿ ತಂಡಗಳನ್ನು ವಿಭಜನೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದೆ’ ಎಂದು ಶ್ರೀಕಾಂತ್ ಅವರು ತಿಳಿಸಿದರು.
ಇದರ ಬಗ್ಗೆ ಕೆಲವು ಆಟಗಾರರಿಗೆ ತಿಳುವಳಿಕೆ ಇಲ್ಲ. ‘ನ್ಯೂ ಕಬಡ್ಡಿ ಪೇಡರೇಷನ್ ಸಂಸ್ಥೆ’ ಬೆಳಗಾವಿಯಲ್ಲಿ ಫೆಡರೇಷನ್ ಕಪ್ ಆಯೋಜಿಸಿದೆ. ಈ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರಕ್ಕೆ’ ದೂರು ನೀಡಿದ್ದೇವೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.