ನವದೆಹಲಿ (ಎಎಫ್ಪಿ): ಪಿಂಕ್ ಬಾಲ್ ಬಗ್ಗೆ ಸಂದೇಹ ಇರುವುದರಿಂದ ಆಸ್ಟ್ರೇಲಿಯಾದಲ್ಲಿ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಆಡಲು ನಿರಾಕರಿಸಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತಾಧಿಕಾರಿ ವಿನೋದ್ ರಾಯ್ ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಜೊತೆ ಗುರುವಾರ ಮಾತನಾಡಿದ ಅವರು ‘ಆಸ್ಟ್ರೇಲಿಯಾದಲ್ಲಿ ಹಗಲು ರಾತ್ರಿ ಪಂದ್ಯ ಆಡಲು ಭಾರತ ತಂಡ ಸಿದ್ಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ವಿಷಯ ದಲ್ಲಿ ಇನ್ನು ಮುಂದೆ ಯಾವುದೇ ಚರ್ಚೆ ಇಲ್ಲ’ ಎಂದರು.
ಭಾರತ ತಂಡ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ ಆರರಂದು ಆರಂಭವಾಗುವ ಮೊದಲ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಕ್ರಿಕೆಟ್ ಆಸ್ಟ್ರೇ ಲಿಯಾ ಬಯಸಿತ್ತು.
ಆದರೆ ಮಹತ್ವದ ಸರಣಿಯಲ್ಲಿ ಪ್ರಯೋಗಗಳನ್ನು ಮಾಡಲು ಇಷ್ಟಪಡುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು.
ನಂತರವೂ ಕ್ರಿಕೆಟ್ ಆಸ್ಟ್ರೇಲಿ ಯಾದ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಸದರ್ಲೆಂಡ್ ಭಾರತದ ಜೊತೆ ಹೊನಲು ಬೆಳಕಿನ ಟೆಸ್ಟ್ ಆಯೋಜಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಕೊನೆಗೆ ಭಾರತ ತಂಡ ಸೋಲಿನ ಭಯದಲ್ಲಿ ಪಿಂಕ್ ಬಾಲ್ನಲ್ಲಿ ಆಡಲು ನಿರಾಕರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿನೋದ್ ರಾಯ್ ‘ದುಲೀಪ್ ಟ್ರೋಫಿ ಕ್ರಿಕೆಟ್ನಲ್ಲಿ ಪಿಂಕ್ ಬಾಲ್ ಬಳಸಲಾಗುತ್ತಿದೆ. ಒತ್ತಾಯದಿಂದ ಹಗಲು ರಾತ್ರಿ ಪಂದ್ಯ ಆಡುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.