ಮುಂಬೈ: ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋತ ಪಂದ್ಯದ ನಂತರ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಮತ್ತು ಸಲಹೆಗಾರ ವೀರೇಂದ್ರ ಸೆಹ್ವಾಗ್ ನಡುವೆ ವಾಗ್ವಾದ ನಡೆದಿದೆ ಎಂದು ವೆಬ್ಸೈಟ್ಗಳು ವರದಿ ಮಾಡಿವೆ. ಇದು ತಂಡದ ಜೊತೆ ಸೆಹ್ವಾಗ್ ಅವರ ಸಂಬಂಧಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪಂದ್ಯ ಮುಗಿದ ತಕ್ಷಣ ಸೆಹ್ವಾಗ್ ಬಳಿಗೆ ತೆರಳಿದ ಪ್ರೀತಿ ಪಂದ್ಯದಲ್ಲಿ ಅನುಸರಿಸಿದ ತಂತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿದೆ.
‘ಕರುಣ್ ನಾಯರ್ ಮತ್ತು ಮನೋಜ್ ತಿವಾರಿ ಅವರಂಥ ಆಟ ಗಾರರು ಇದ್ದಾಗಲೂ ರಾಯಲ್ ಎದುರಿನ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಅವರು ಶೂನ್ಯಕ್ಕೆ ಔಟಾಗಿದ್ದರು.
ಇದು ಜಿಂಟಾ ಅವರಿಗೆ ಬೇಸರ ತರಿಸಿತ್ತು’ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ‘ಆರಂಭದಲ್ಲಿ ಪ್ರೀತಿ ಅವರಿಗೆ ಪ್ರತ್ಯುತ್ತರ ನೀಡಲಿಲ್ಲ.
ಪ್ರೀತಿಯನ್ನು ಸಮಾಧಾನಪಡಿಸುವಂತೆ ತಂಡದ ಮಾಲೀಕರನ್ನು ಕೋರಿಕೊಂಡಿದ್ದಾರೆ. ಆದರೂ ಪ್ರಯೋಜನ ಆಗದ ಕಾರಣ ತಾವು ಮಾಡಿದ ಪ್ರಯೋಗವನ್ನು ಸಮರ್ಥಿಸಿಕೊಳ್ಳಲು ಶ್ರಮಿಸಿದ್ದಾರೆ’ ಎಂದು ಮೂಲಗಳು ಹೇಳಿವೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.