ಮುಂಬೈ: ಮುಂಬರುವ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ 18 ನಗರಗಳಲ್ಲಿ ಪ್ರತಿಭಾ ಶೋಧ ನಡೆಸುವುದಾಗಿ ಸಂಘಟಕರು ಹಾಗೂ ಅಖಿಲ ಭಾರತ ಕಬಡ್ಡಿ ಫೆಡರೇಷನ್ ಹೇಳಿದೆ.
ಹೊಸ ಆಟಗಾರರನ್ನು ಹುಡುಕುವ ಮೂಲಕ ಲೀಗ್ಗೆ ಹೊಸತನ ತುಂಬುವ ಯೋಜನೆಯನ್ನು ಹೊಂದಿರುವುದಾಗಿ ಪಿಕೆಎಲ್ ಸಂಘಟಕರು ಹಾಗೂ ಮಾರ್ಷಲ್ ಸ್ಪೋರ್ಟ್ಸ್, ಎಕೆಎಫ್ ನಡುವೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಚೆನ್ನೈ, ಕೊಯಮತ್ತೂರು, ನಾಗಪುರ, ತ್ರಿಶೂರ್, ಚಂಡೀಗಡ, ಬೆಂಗಳೂರು, ನವದೆಹಲಿ, ಲಖನೌ, ವಿಶಾಖಪಟ್ಟಣ, ಪಟ್ನಾ, ಹೈದರಾಬಾದ್, ಕೋಲ್ಕತ್ತ, ಇಂದೋರ್, ಇಂಫಾಲ, ಜೈಪುರ, ಭುವನೇಶ್ವರ ಮತ್ತು ಅಹಮದಾಬಾದ್ ನಗರಗಳಲ್ಲಿ ಪ್ರತಿಭಾ ಶೋಧ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದೆ ನಡೆದ ಸ್ಥಳೀಯ ಟೂರ್ನಿಗಳನ್ನು ಆಧರಿಸಿ ನಗರಗಳನ್ನು ಆಯ್ಕೆ ಮಾಡಲಾಗಿದೆ.
‘ಭವಿಷ್ಯದ ಕಬಡ್ಡಿ ಹೀರೊಗಳು’ ಕಾರ್ಯಕ್ರಮವನ್ನು ಪ್ರತೀ ನಗರದಲ್ಲಿ 2ರಿಂದ 3ದಿನ ನಡೆಸಲಾಗುತ್ತದೆ. ಹೋದ ವರ್ಷ 4,600 ಸ್ಪರ್ಧಿಗಳು ಪ್ರತಿಕ್ರಿಯಿಸಿದ್ದರು. ಅಂತಿಮವಾಗಿ 133 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು. ಈ ವರ್ಷ ಪ್ರತಿಭಾ ಶೋಧಕ್ಕಾಗಿ ಇಂಫಾಲ್, ತ್ರಿಶೂರ್, ಭುವನೇಶ್ವರ, ಅಹಮದಾಬಾದ್, ಪಟ್ನಾ ನಗರಗಳನ್ನು ಹೊಸದಾಗಿ ಸೇರಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
‘ಭವಿಷ್ಯದ ಕಬಡ್ಡಿ ಹೋರೊಗಳು ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ. ಯುವ ಆಟಗಾರರಿಗೆ ಇದು ದೊಡ್ಡ ವೇದಿಕೆ’ ಎಂದು ಭಾರತ ತಂಡದ ಆಟಗಾರ ಅನೂಪ್ ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.