ADVERTISEMENT

ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ಗೆ ಸಿದ್ಧತೆ

ಸಿಂಥೆಟಿಕ್‌ ಟ್ರ್ಯಾಕ್‌ಗೆ ನಿರ್ವಹಣೆ ಕೊರತೆ

ವಿಜಯ್ ಹೂಗಾರ
Published 28 ಏಪ್ರಿಲ್ 2015, 19:30 IST
Last Updated 28 ಏಪ್ರಿಲ್ 2015, 19:30 IST

ಮಂಗಳೂರು: ರಾಷ್ಟ್ರೀಯ ಫೆಡರೇಷನ್‌ ಕಪ್‌ ಸೀನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ಗೆ ಕೇವಲ ಎರಡು ದಿನಗಳು ಬಾಕಿ ಉಳಿದಿದ್ದು, ಅದಕ್ಕಾಗಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ.

ಮೇ 1ರಿಂದ 4ರ ವರೆಗೆ ನಡೆಯ ಲಿರುವ ಕ್ರೀಡಾಕೂಟದಲ್ಲಿ ದೇಶದ ದೇಶದ ಪ್ರಮುಖ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ತರಬೇತುದಾರರ ಸಮೇತ ಮಂಗಳೂರಿಗೆ ಬಂದಿದ್ದು ಅಭ್ಯಾಸ ನಡೆಸುತ್ತಿದ್ದಾರೆ.

ಅಖಿಲ ಭಾರತ ಅಥ್ಲೆಟಿಕ್‌ ಫೆಡ ರೇಷನ್‌, ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಪದಾಧಿಕಾರಿಗಳು,  ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾ ರಿಗಳು ಸಿದ್ಧತಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಮಂಗಳಾ ಕ್ರೀಡಾಂಗಣ ಸಜ್ಜು: ಕ್ರೀಡಾ ಕೂಟ ನಡೆಯಲಿರುವ ಮಂಗಳಾ ಕ್ರೀಡಾಂಗಣದಲ್ಲಿನ ಗ್ಯಾಲರಿ ಹಾಗೂ ಪೆವಿಲಿಯನ್‌ಗೆ ಬಣ್ಣ ಬಳಿದು ಸಿಂಗರಿಸ ಲಾಗಿದೆ. ಕ್ರೀಡಾಂಗಣದ ಮಧ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಹಸಿರು ಹುಲ್ಲಿನ ಹಾಸು ಬೆಳೆಸಲಾಗುತ್ತದೆ. ಸುತ್ತಲೂ ಹೊನಲುಬೆಳಕಿನ ದೀಪಗಳು, ಸಿಸಿಟಿವಿ ಕಾಮೆರಾ ಅಳವಡಿಸುವ ಕೆಲಸ ನಡೆಯುತ್ತಿದೆ.

ಕ್ರೀಡಾಕೂಟಕ್ಕಾಗಿಯೇ ರಾಜ್ಯ ಸರ್ಕಾರ  ಪೋಲ್‌ವಾಲ್ಟ್‌ ಬೆಡ್‌, ಲಾಂಗ್‌ ಜಂಪ್‌ ಬೆಡ್‌,  ಹರ್ಡಲ್ಸ್‌ ಸಲಕರಣೆಗಳು ಸೇರಿದಂತೆ ಸುಮಾರು ₹65 ಲಕ್ಷಗಳ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಖರೀ ದಿಸಿದೆ ಎಂದು ಕ್ರೀಡಾ ಇಲಾಖೆ ಕಾರ್ಯ ದರ್ಶಿ ನಾಗಾಂಬಿಕಾ ದೇವಿ ಅವರು ತಿಳಿಸಿದ್ದಾರೆ.

ಸಜ್ಜಾಗದ ಟ್ರ್ಯಾಕ್‌:  ಇಡೀ ಕ್ರೀಡಾಂಗಣಕ್ಕೆ  ಹೊಸ ರೂಪ ನೀಡಲಾಗುತ್ತಿದೆ. ಆದರೆ, ಕ್ರೀಡಾಪಟುಗಳಿಗೆ ಮುಖ್ಯವಾಗಿ ಬೇಕಾದ ಸಿಂಥೆಟಿಕ್‌ ಟ್ರ್ಯಾಕ್‌ ಮಾತ್ರ ಕಳಾಹೀನ ವಾಗಿದೆ. ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಸಿಂಥೆಟಿಕ್‌ ಟ್ರ್ಯಾಕ್‌ ಸರಿಯಾದ ನಿರ್ವಹಣೆ ಇಲ್ಲದೆ ಮೂಲ ಸ್ವರೂಪವನ್ನು ಕಳೆದು ಕೊಂಡಂತಿದೆ.

ಕೆಲವಡೆ ಕಿತ್ತುಹೋಗಿರುವ ಸಿಂಥೆ ಟಿಕ್‌ ಟ್ರ್ಯಾಕ್‌ಗೆ ತೇಪೆ ಹಾಕಲಾಗಿದ್ದರೂ ಸಮರ್ಪಕವಾಗಿಲ್ಲ. ಕೆಲವಡೆ ಟ್ರ್ಯಾಕ್‌ ಮಾರ್ಕ್‌ ಅಳಿಸಿಹೋಗಿದೆ. ಇನ್ನೂ ಟ್ರ್ಯಾಕ್‌ ಮಾರ್ಕ್‌ ಹಾಕಲಾಗಿಲ್ಲ. ಮಂಗಳವಾರ ಟ್ರ್ಯಾಕನ್ನು ಸಾಮಾನ್ಯ ಏರ್‌ ಕಂಪ್ರೆಸರ್‌ನಿಂದ ಸ್ವಚ್ಛಗೊಳಿಸಲಾಗು ತ್ತಿತ್ತು. ಇದರಿಂದ ಟ್ರ್ಯಾಕ್‌ನಲ್ಲಿನ ರಬ್ಬರ್‌ ಮಿಶ್ರಿತ ಹರಳು ಕಿತ್ತು ಹೋಗುತ್ತಿರು ವುದು ಕಂಡು ಬಂದಿತು.

‘ಟ್ರ್ಯಾಕ್‌ ಅನ್ನು ಸಾಮಾನ್ಯ ಏರ್‌ ಕಂಪ್ರೆಸರ್‌ನಿಂದ ಸ್ವಚ್ಛಗೊಳಿಸಿದರೆ, ಟ್ರ್ಯಾಕ್‌ ಬೇಗ ಹಾಳಾಗುತ್ತದೆ. ಅದಕ್ಕಾ ಗಿಯೇ ಸಿಂಥೆಟಿಕ್‌ ಕ್ಲೀನರ್‌ ಎನ್ನುವ ಏರ್‌ ಕಂಪ್ರೆಸರ್‌ ಇದೆ. ಅದು ₹40 ಸಾವಿರಕ್ಕೆ ಸಿಗುತ್ತದೆ. ₹3–4ಕೋಟಿ ಖರ್ಚು ಮಾಡಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವ ಸರ್ಕಾರ, ಅದರ ನಿರ್ವಹಣೆ ಬೇಕಾಗುವ ವಸ್ತುಗಳನ್ನು ನೀಡುವುದಿಲ್ಲ.

ನಿರ್ವಹಣಾ ವಸ್ತುಗಳನ್ನು ಕೊಟ್ಟರೆ ಟ್ರ್ಯಾಕ್‌ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಮಂಗಳೂರಿನ ಹಿರಿಯ ಅಥ್ಲೀಟ್‌ ಸುನೀಲ್‌ ಶೆಟ್ಟಿ. ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣದ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಹೊರತೂ, ಕ್ರೀಡಾಂಗಣದೊಳಗೆ ಕ್ರೀಡಾಪಟುಗಳಿಗೆ ಪೂರಕವಾದ ಕೆಲಸಗಳು ನಡೆದಿಲ್ಲ ಎಂಬುದು ಅಭ್ಯಾಸಕ್ಕೆ ಬರುವ ಬಹುತೇಕ ಕ್ರೀಡಾಪಟುಗಳ ಆರೋಪವಾಗಿದೆ.

ಮಂಗಳಾ ಕ್ರೀಡಾಂಗಣದ ಹೊರ ಭಾಗದಲ್ಲಿರುವ ಹೆರಿಟೇಜ್‌ ಕಟ್ಟಡವನ್ನು ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಕ್ರೀಡಾಕೂಟದ ಉದ್ದೀಪನ ಮದ್ದು ತಡೆ ಕೇಂದ್ರವನ್ನು ಆರಂಭಿಸಲು ವಿಶೇಷವಾಗಿ ನವೀಕರಣಗೊಳಿಸಲಾಗಿದೆ. ಈ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಂಗಳವಾರ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT