ಬೆಂಗಳೂರು: ಆಕಾಶ್ ಅಶೋಕ್ ಕುಮಾರ್ ಅವರು ಕರ್ನಾಟಕ ರಾಜ್ಯ ಟೆನ್ಪಿನ್ ಬೌಲಿಂಗ್ ಸಂಸ್ಥೆ (ಕೆಎಸ್ಟಿಬಿಎ) ಆಶ್ರಯದಲ್ಲಿ ನಡೆದ ಸ್ಟಾರ್ ಸಿಟಿ ರಾಜ್ಯ ರ್ಯಾಂಕಿಂಗ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬುಧವಾರ ನಡೆದ ರೋಚಕ ಫೈನಲ್ನಲ್ಲಿ ಆಕಾಶ್ 430-407 ಪಾಯಿಂಟುಗಳ ಅಂತರದಿಂದ ರಾಷ್ಟ್ರೀಯ ಚಾಂಪಿಯನ್ ಶಬ್ಬೀರ್ ಧನ್ಕೋಟ್ ವಿರುದ್ಧ ವಿಜಯ ಸಾಧಿಸಿದರು.
ಅಂತಿಮ ಹಣಾಹಣಿಯ ಮೊದಲ ಗೇಮ್ನಲ್ಲಿ ಆಕಾಶ್ ಹನ್ನೊಂದು ಪಾಯಿಂಟುಗಳಿಂದ ಮುನ್ನಡೆ (193-182) ಸಾಧಿಸಿದರು. ಆಗಲೇ ಗೆಲ್ಲುವ ವಿಶ್ವಾಸ ಪಡೆದ ಅವರು ಎರಡನೇ ಗೇಮ್ನಲ್ಲಿಯೂ ನಿಖರವಾಗಿ ಗೋಲವನ್ನು ಉರುಳಿಸುವ ಮೂಲಕ ಹೆಚ್ಚು ಪಾಯಿಂಟುಗಳನ್ನು ಗಿಟ್ಟಿಸಿದರು.
ಆದರೆ ಶಬ್ಬೀರ್ ಅವರು ಪಿನ್ಗಳನ್ನು ಹೊಡೆದುರುಳಿಸುವಲ್ಲಿ ಸ್ವಲ್ಪ ಕಷ್ಟಪಡಬೇಕಾಯಿತು. ಆದ್ದರಿಂದ ಎರಡನೇ ಗೇಮ್ನಲ್ಲಿ ಅವರಿಗೆ ದಕ್ಕಿದ್ದು 225 ಪಾಯಿಂಟ್ಸ್. ವಿಜಯಿ ಆಕಾಶ್ 237 ಪಾಯಿಂಟುಗಳೊಂದಿಗೆ ವಿಜಯೋತ್ಸವ ಆಚರಿಸಿದರು.
ಹೆಚ್ಚು ಗೇಮ್ನಲ್ಲಿ ಇನ್ನೂರಕ್ಕೂ ಅಧಿಕ ಪಾಯಿಂಟುಗಳನ್ನು ಗಳಿಸಿದ ಸಾಧನೆ ಮಾಡಿದ ಗಿರೀಶ್ ಗಾಬಾ ವಿಶೇಷ ಪ್ರಶಸ್ತಿ ಪಡೆದುಕೊಂಡರು. ಒಂದೇ ಗೇಮ್ನಲ್ಲಿ ಅತಿ ಹೆಚ್ಚು ಪಾಯಿಂಟುಗಳನ್ನು ಗಿಟ್ಟಿಸಿದ ಶ್ರೇಯಕ್ಕೆ ಶಬ್ಬೀರ್ ಪಾತ್ರರಾದರು. ಅವರು ಅರ್ಹತಾ ಸುತ್ತಿನ ಪಂದ್ಯದ ಒಂದು ಗೇಮ್ನಲ್ಲಿ 287 ಪಾಯಿಂಟುಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.