ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ ಪಿ.ಸಿ. ತುಳಸಿ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಅವರ ಸವಾಲೂ ಅಂತ್ಯಗೊಂಡಿದೆ.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಸೋಮವಾರ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾದವು. ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿಎಸ್ಪಿಬಿಯ ಪಿ.ವಿ. ಸಿಂಧು 19-21, 21-11, 21-12 ರಲ್ಲಿ ತುಳಸಿಗೆ ಆಘಾತ ನೀಡಿದರು. ಅದಿತಿ ಮುಟತ್ಕರ್, ಸಯಾಲಿ ಗೋಖಲೆ ಮತ್ತು ನೇಹಾ ಪಂಡಿತ್ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆದರು.
ಪಿಎಸ್ಪಿಬಿಯ ಅದಿತಿ 21-7, 21-7 ರಲ್ಲಿ ಸಹದೇವ್ ಮೋಹಿತಾ ಮೇಲೂ, ಏರ್ ಇಂಡಿಯಾದ ಸಯಾಲಿ 21-14, 21-9 ರಲ್ಲಿ ಕೇರಳದ ದಯಾ ಎಲ್ಸಾ ಎದುರೂ, ನೇಹಾ 21-15, 21-13 ರಲ್ಲಿ ಪಿಎಸ್ಪಿಬಿಯ ತೃಪ್ತಿ ಮುರ್ಗುಂಡೆ ವಿರುದ್ಧವೂ ಜಯ ಸಾಧಿಸಿದರು.
ಶ್ರೇಯಾಂಕ ರಹಿತ ಆಟಗಾರ ಆನಂದ್ ಪವಾರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಬ್ಬರು ಪ್ರಮುಖರಿಗೆ ಸೋಲುಣಿಸಿದರು. ಬೆಳಿಗ್ಗೆ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21-9, 21-19 ರಲ್ಲಿ ಪಿಎಸ್ಪಿಬಿಯ ಅರವಿಂದ್ ಭಟ್ ವಿರುದ್ಧ ಗೆದ್ದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಸಾಕಷ್ಟು ತಪ್ಪುಗಳನ್ನೆಸಗುವ ಮೂಲಕ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಸಂಜೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪವಾರ್ 13-21, 21-12, 21-16 ರಲ್ಲಿ ಆರನೇ ಶ್ರೇಯಾಂಕದ ಆರ್ಎಂವಿ ಗುರುಸಾಯಿದತ್ ಅವರನ್ನು ಮಣಿಸಿದರು. ಅಗ್ರಶ್ರೇಯಾಂಕದ ಸೌರಭ್ ವರ್ಮಾ 21-19, 21-15 ರಲ್ಲಿ ಅಕ್ಷಿತ್ ಮಹಾಜನ್ ಅವರನ್ನು ಮಣಿಸಿದರು.
ಕರ್ನಾಟಕದ ಆದಿತ್ಯ ಪ್ರಕಾಶ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ 22-20, 12-21, 20-22 ರಲ್ಲಿ ನಂದಗೋಪಾಲ್ ಎದುರು ಸೋಲು ಕಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.