ಬ್ಯಾಡ್ಮಿಂಟನ್: ಸಂಕೀರ್ತ್ ಚಾಂಪಿಯನ್
ಪ್ರಜಾವಾಣಿ ವಾರ್ತೆ Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಬೆಂಗಳೂರು: ಯುವ ಆಟಗಾರ ಬಿ.ಆರ್. ಸಂಕೀರ್ತ್ ಇಲ್ಲಿ ನಡೆದ ತ್ರಿ ಸ್ಟ್ರಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು.
ಎನ್ಜಿವಿ ಕ್ಲಬ್ನಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಕೀರ್ತ್ 16-21, 21-10, 21-19ರಲ್ಲಿ ಹರ್ಷಿತ್ ಅಗರ್ವಾಲ್ ಅವರನ್ನು ಮಣಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಹರ್ಷಿತ್ 21-9, 21-14ರಲ್ಲಿ ಕೆ. ಲೋಕಸಾಯಿನಾಥ್ ಮೇಲೂ, ಸಂಕೀರ್ತ್ 21-15, 21-19ರಲ್ಲಿ ಆಕಾಶ್ರಾಜ್ ಮೂರ್ತಿ ವಿರುದ್ಧವೂ ಗೆಲುವು ಸಾಧಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದರು.
ಬಾಲಕರ ವಿಭಾಗದ 15 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಅನಿರುದ್ಧ್ ದೇಶಪಾಂಡೆ 21-11, 21-16ರಲ್ಲಿ ಎಸ್. ವಿಘ್ನೇಶ್ ವಿರುದ್ಧ ಜಯ ಪಡೆದರೆ, 13 ವರ್ಷದೊಳಗಿನವರ ವಿಭಾಗದಲ್ಲಿ ತೇಜಸ್ ಸಂಜಯ್ 21-17, 21-17ರಲ್ಲಿ ಕೆ. ಪ್ರತೀಕ್ ಎದುರು ಜಯ ಪಡೆದು ಪ್ರಶಸ್ತಿ ಗೆದ್ದುಕೊಂಡರು.
ಅಪೇಕ್ಷಾಗೆ ಪ್ರಶಸ್ತಿ: ಬಾಲಕಿಯರ 15 ವರ್ಷದೊಳಗಿನವರ ವಿಭಾಗದಲ್ಲಿ ಅಪೇಕ್ಷಾ ನಾಯಕ್ 21-9, 21-6ರಲ್ಲಿ ಅರ್ಚನಾ ಪೈ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆದರು. ಈ ಆಟಗಾರ್ತಿ ನಾಲ್ಕರ ಘಟ್ಟದ ಪಂದ್ಯದಲ್ಲಿ 21-13, 21-13ರಲ್ಲಿ ಆರ್.ಎನ್. ಸವಿತಾ ಅವರನ್ನು ಸೋಲಿಸಿದ್ದರು.