ಬಿಷಕೆಕ್: ಭಾರತ ತಂಡದವರು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್ಸಿ) ಏಷ್ಯಾಕಪ್ ಮೂರನೇ ಸುತ್ತಿನ ಅರ್ಹತಾ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕಿರ್ಗಿಸ್ತಾನ ವಿರುದ್ಧ ಸೆಣಸಲಿದ್ದಾರೆ.
ಮಂಗಳವಾರ ನಡೆಯುವ ಈ ಹೋರಾಟದಲ್ಲಿ ಭಾರತ ತಂಡ ಸುಲಭವಾಗಿ ಗೆಲ್ಲುವ ವಿಶ್ವಾಸ ಹೊಂದಿದೆ. ಸ್ಟೀಫನ್ ಕಾನ್ಸ್ಟೆಂಟೈನ್ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಭಾರತ ತಂಡ ಈಗಾಗಲೇ ಏಷ್ಯಾಕಪ್ಗೆ ಅರ್ಹತೆ ಗಳಿಸಿದೆ.
ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿರುವ ಭಾರತ ಒಟ್ಟು 13 ಪಾಯಿಂಟ್ಸ್ ಸಂಗ್ರಹಿಸಿದ್ದು ‘ಎ’ ಗುಂಪಿನ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಕಿರ್ಗಿಸ್ತಾನ 5 ಪಂದ್ಯಗಳಿಂದ 10 ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಹೊಂದಿದೆ.
2017ರ ಜೂನ್ 13ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆಗ ಭಾರತ 1–0 ಗೋಲಿನಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಸುನಿಲ್ ಚೆಟ್ರಿ ಗೆಲುವಿನ ಗೋಲು ದಾಖಲಿಸಿದ್ದರು.
ಮುಂಚೂಣಿ ವಿಭಾಗದಲ್ಲಿ ಭಾರತದ ಬಲ ಎನಿಸಿದ್ದ ಚೆಟ್ರಿ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಸುಭಾಶಿಶ್ ಬೋಸ್, ನಿಶುಕುಮಾರ್ ಮತ್ತು ಸಂದೇಶ್ ಜಿಂಗಾನ್, ರಕ್ಷಣಾ ವಿಭಾಗದಲ್ಲಿ ತಂಡದ ಬಲ ಅನಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಮಿಂಚಿದ್ದ ಇವರು ಕಿರ್ಗಿಸ್ತಾನ ಎದುರೂ ಮೋಡಿ ಮಾಡಲು ಕಾಯುತ್ತಿದ್ದಾರೆ. ಕಿರ್ಗಿಸ್ತಾನ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಈ ತಂಡ ಭಾರತದ ವಿರುದ್ಧ ಗೆದ್ದು ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಆಲೋಚನೆ ಹೊಂದಿದೆ.
ಪಂದ್ಯದ ಆರಂಭ: ರಾತ್ರಿ 7.30ಕ್ಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.