ADVERTISEMENT

ಭಾರತ ಹಾಕಿ ತಂಡಕ್ಕೆ ನಿರಾಸೆ

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಭಾರತದ ಮನದೀಪ್ ಸಿಂಗ್‌ (ಎಡ) ಇಂಗ್ಲೆಂಡ್‌ನ ಲ್ಯಾನ್ ಸೋಲನ್ ಅವರಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭ ಎಎಫ್‌ಪಿ ಚಿತ್ರ
ಭಾರತದ ಮನದೀಪ್ ಸಿಂಗ್‌ (ಎಡ) ಇಂಗ್ಲೆಂಡ್‌ನ ಲ್ಯಾನ್ ಸೋಲನ್ ಅವರಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭ ಎಎಫ್‌ಪಿ ಚಿತ್ರ   

ಗೋಲ್ಡ್ ಕೋಸ್ಟ್‌: ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1–2ರಿಂದ ಸೋತ ಭಾರತ ಹಾಕಿ ತಂಡ ಕಾಮನ್‌ವೆಲ್ತ್‌ ಕೂಟದಿಂದ ಬರಿಗೈಯಲ್ಲಿ ಮರಳಲಿದೆ. ಶನಿವಾರ ನಡೆದ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ಬಳಗ ಗೆಲ್ಲಲು ನಡೆಸಿದ ಪ್ರಯತ್ನವೆಲ್ಲವೂ ವಿಫಲವಾಯಿತು.

ಎದುರಾಳಿಗಳ ಪ್ರಬಲ ರಕ್ಷಣಾ ವಿಭಾಗವನ್ನು ಭೇದಿಸಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು. ಗುಂಪು ವಿಭಾಗದಲ್ಲಿ ಭಾರತದ ವಿರುದ್ಧ ಅನುಭವಿಸಿದ 3–4 ಅಂತರದ ಸೋಲಿಗೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು.

ಭಾರತದ ಪರ ವರುಣ್ ಕುಮಾರ್ (27ನೇ ನಿಮಿಷ) ಗೋಲು ಗಳಿಸಿದರೆ ಇಂಗ್ಲೆಂಡ್‌ಗೆ ಸ್ಯಾಮ್‌ ವಾರ್ಡ್‌ (7, 43ನೇ ನಿ) ಗೋಲು ತಂದಿತ್ತರು.

ADVERTISEMENT

ಆರಂಭದ ಕೆಲವು ನಿಮಿಷಗಳಲ್ಲಿ ಭಾರತ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿತ್ತು. ನಂತರ ಇಂಗ್ಲೆಂಡ್ ಮೇಲುಗೈ ಸಾಧಿಸಿತು. ಇಂಗ್ಲೆಂಡ್‌ಗೆ ಲಭಿಸಿದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತದ ಅಮಿತ್ ರೋಹಿದಾಸ್‌ ವಿಫಲಗೊಳಿಸಿದರು. ಆದರೆ ಏಳನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಅವಕಾಶದಲ್ಲಿ ವಾರ್ಡ್‌ ಗೋಲು ಗಳಿಸಿದರು.

ಮೊದಲಾರ್ಧದಲ್ಲಿ 1–1ರ ಸಮಬಲ ಸಾಧಿಸಿದ್ದ ಉಭಯ ತಂಡಗಳು ಮೂರನೇ ಕ್ವಾರ್ಟರ್‌ನಲ್ಲಿ ಭಾರಿ ಪೈಪೋಟಿ ನಡೆಸಿದವು. ಇಂಗ್ಲೆಂಡ್ ತಂಡ ಉತ್ತಮ ಪಾಸ್‌ಗಳೊಂದಿಗೆ ಭಾರತದ ಆಟಗಾರರಿಗೆ ಚೆಂಡು ಸಿಗದಂತೆ ನೋಡಿಕೊಂಡರು. 39 ಮತ್ತು 42ನೇ ನಿಮಿಷಗಳಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಭಾರತ ಕೈಚೆಲ್ಲಿತು. ಎದುರಾಳಿ ತಂಡಕ್ಕೆ ವಾರ್ಡ್‌ ಜಯದ ಗೋಲು ಗಳಿಸಿಕೊಟ್ಟರು. ಕಳೆದ ಎರಡು ಕೂಟಗಳಲ್ಲಿ ಭಾರತ ತಂಡದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.