ADVERTISEMENT

ಮೈಸೂರಿನಲ್ಲಿ ರಣಜಿ ಕ್ವಾರ್ಟರ್‌ಫೈನಲ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಮೈಸೂರು: ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್‌ಫೈನಲ್‌ ಪಂದ್ಯವು ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಕರ್ನಾಟಕ ಇರುವುದಿಲ್ಲ! ತಟಸ್ಥ ಸ್ಥಳದಲ್ಲಿ ಎಂಟರ ಘಟ್ಟದ ಪಂದ್ಯಗಳು ನಡೆಯಬೇಕು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿ ಸಿರುವುದರಿಂದ ಗಂಗೋತ್ರಿಯಲ್ಲಿ  ಬೇರೆ ರಾಜ್ಯಗಳ ನಡುವಿನ ಎಂಟರ ಘಟ್ಟದ ಪಂದ್ಯ ನಡೆಯಲಿದೆ.

‘ಕಳೆದ ಕೆಲವು ಟೂರ್ನಿಗಳಲ್ಲಿ ಎಂಟರ ಘಟ್ಟದ ಹಂತದಲ್ಲಿ ಪಿಚ್‌ಗಳ ಸಮಸ್ಯೆಯಾಗಿದ್ದು ಮತ್ತು ಈ ಬಾರಿಯ ಲೀಗ್‌ನಲ್ಲಿಯೂ ಕೆಲವೆಡೆ ಪಿಚ್‌ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ.      ಲೀಗ್ ಹಂತದ ಪಂದ್ಯಗಳು ಸಮಾಪ್ತಿಯಾದ ನಂತರ ಎಂಟರ ಘಟ್ಟದ ಪಂದ್ಯಗಳು ನಿರ್ಧಾರ ಗೊಳ್ಳಲಿವೆ. ಕರ್ನಾಟಕ ತಂಡವು ಎಂಟರ ಘಟ್ಟ ಪ್ರವೇಶಿಸಿದರೆ, ಬೇರೆ ರಾಜ್ಯದಲ್ಲಿ ಆಡಬೇಕಾಗುತ್ತದೆ.

ಇದರಿಂದ ನಮ್ಮ ಸ್ಥಳೀಯ ಉದಯೋನ್ಮುಖ ಆಟಗಾರರಿಗೆ ಯಾವುದೇ ಪ್ರಯೋಜನವಿಲ್ಲ. ನಮ್ಮ ತವರಿನ ತಂಡಗಳು ಆಡಿದಾಗ ಮಾತ್ರ ಆಸಕ್ತರು, ಅಭಿಮಾನಿಗಳು ಬಂದು ನೋಡುತ್ತಾರೆ. ಇದರಿಂದ ಬೆಳೆಯುವ ಹುಡುಗರಿಗೆ ಅನುಕೂಲವಾಗುತ್ತದೆ. ಕೆಲವು ವರ್ಷಗಳ ಹಿಂದೆಯೂ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ನಂತರ ಆ ಪದ್ಧತಿಯನ್ನು ರದ್ದುಗೊಳಿಸಲಾಗಿತ್ತು’ ಎಂದು ಇಲ್ಲಿಗೆ ಭೇಟಿ ನೀಡಿದ್ದ ಬ್ರಿಜೇಶ್‌ ಪಟೇಲ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT