ADVERTISEMENT

ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ರಾಜ್‌ಕೋಟ್ (ಪಿಟಿಐ): ರವೀಂದ್ರ ಜಡೇಜ ಅವರ ಆಲ್‌ರೌಂಡ್ ಆಟದ ನೆರವಿನಿಂದ ಸೌರಾಷ್ಟ್ರ ತಂಡ ಮಂಗಳವಾರ ಇಲ್ಲಿ ಕೊನೆಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಎ' ಗುಂಪಿನ ಪಂದ್ಯದಲ್ಲಿ ಬಂಗಾಳ ವಿರುದ್ಧ 270 ರನ್‌ಗಳ ಜಯ ಸಾಧಿಸಿತು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 431 ರನ್‌ಗಳ ಕಠಿಣ ಸವಾಲು ಪಡೆದ ಬಂಗಾಳ 55.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟಾಯಿತು. ಜಡೇಜ (50ಕ್ಕೆ 4) ಮತ್ತು ನಯನ್ ದೋಷಿ (58ಕ್ಕೆ 3) ಎದುರಾಳಿ ತಂಡದ ಪತನಕ್ಕೆ ಕಾರಣರಾದರು.

ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 70 ಹಾಗೂ 68 ರನ್ ಗಳಿಸಿದ್ದ ಜಡೇಜ ಬೌಲಿಂಗ್‌ನಲ್ಲೂ ಮಿಂಚಿ ಒಟ್ಟಾರೆ 98 ರನ್‌ಗಳಿಗೆ ಎಂಟು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಮುಂಬೈ- ಪಂಜಾಬ್ ಪಂದ್ಯ ಡ್ರಾ: ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ನಾಟಕೀಯ ಬೆಳವಣಿಗೆ ಕಂಡುಬಂದರೂ ಪಂಜಾಬ್ ತಂಡ ಮುಂಬೈ ವಿರುದ್ಧ ಡ್ರಾ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಪಂಜಾಬ್ ಎರಡನೇ ಇನಿಂಗ್ಸ್‌ನಲ್ಲಿ ಅಂಕಿತ್ ಚವಾಣ್ (23ಕ್ಕೆ 9) ಅವರ ಮಾರಕ ಬೌಲಿಂಗ್ ದಾಳಿಯ ಮುಂದೆ ಕುಸಿತ ಕಂಡು ಕೇವಲ 59 ರನ್‌ಗಳಿಗೆ ಆಲೌಟಾಯಿತು.

ಇದರಿಂದ ಮುಂಬೈ ಗೆಲುವಿಗೆ 11 ಓವರ್‌ಗಳಲ್ಲಿ 156 ರನ್ ಗಳಿಸುವ ಗುರಿ ಲಭಿಸಿತು. ಆದರೆ ಮುಂಬೈ ಆರು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 62 ರನ್ ಗಳಿಸಿದ ಬಳಿಕ ಡ್ರಾಕ್ಕೆ ಒಪ್ಪಿಕೊಂಡಿತು. ಮಹಾರಾಷ್ಟ್ರ- ಹರಿಯಾಣ ಮತ್ತು ಉತ್ತರ ಪ್ರದೇಶ- ವಿದರ್ಭ ತಂಡಗಳ ನಡುವಿನ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿತು.

ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ: 209 ಮತ್ತು 8 ವಿಕೆಟ್‌ಗೆ 333 ಡಿಕ್ಲೇರ್ಡ್; ಬಂಗಾಳ: 112 ಮತ್ತು 55.4 ಓವರ್‌ಗಳಲ್ಲಿ 160 (ರೋಹನ್ ಬ್ಯಾನರ್ಜಿ 47, ರವೀಂದ್ರ ಜಡೇಜ 50ಕ್ಕೆ 4) ಫಲಿತಾಂಶ: ಸೌರಾಷ್ಟ್ರಕ್ಕೆ 270 ರನ್ ಜಯ
ಪಂಜಾಬ್: 580 ಮತ್ತು 59; ಮುಂಬೈ: 485 ಮತ್ತು 6 ಓವರ್‌ಗಳಲ್ಲಿ 2 ವಿಕೆಟ್‌ಗೆ 61, ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.