ADVERTISEMENT

ರಾಯಲ್ಸ್‌ಗೆ ಜಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಸಂಕಷ್ಟದಲ್ಲಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ `ಅಸಹಾಯಕತೆ'ಯ ಲಾಭ ಪಡೆಯುಲು ರಾಜಸ್ತಾನ ರಾಯಲ್ಸ್ ತಂಡ ಲೆಕ್ಕಾಚಾರದಲ್ಲಿ ತೊಡಗಿದೆ. ಈ ಮೂಲಕ ಶನಿವಾರ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ನ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡುವ ವಿಶ್ವಾಸವನ್ನೂ ಹೊಂದಿದೆ.

ಡೆಲ್ಲಿ ತಂಡದ ಪ್ರಮುಖ ಆಟಗಾರರಾದ ಕೆವಿನ್ ಪೀಟರ್ಸನ್, ಹಲ್ಲೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ನ್ಯೂಜಿಲೆಂಡ್‌ನ ಜೆಸ್ಸಿ ರೈಡರ್ ಅಲಭ್ಯವಾಗಿದ್ದು, ಇದು ಮಾಹೇಲ ಜಯವರ್ಧನೆ ನೇತೃತ್ವದ ಡೆವಿಲ್ಸ್‌ಗೆ ಭಾರಿ ಪೆಟ್ಟು ನೀಡಿದೆ. ಈ ಹಿನ್ನೆಡೆ ಒಂದೆಡೆಯಾದರೆ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಬೆನ್ನು ನೋವಿನಿಂದ ಇನ್ನೂ ಚೇತರಿಸಿಕೊಳ್ಳದೇ ಇರುವುದು ಮತ್ತೊಂದು ಪೆಟ್ಟು. ಡೆವಿಲ್ಸ್ ಆರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಸೋಲು ಕಂಡಿತ್ತು.

2008ರ ಐಪಿಎಲ್‌ನಲ್ಲಿ ರಾಜಸ್ತಾನ ತಂಡ ಚಾಂಪಿಯನ್ ಆಗಿತ್ತು. ಈ ತಂಡದಲ್ಲಿ ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ ಪ್ರಮುಖ ಆಟಗಾರರು. ಶೇನ್ ವಾಟ್ಸನ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ದ್ರಾವಿಡ್ ಜೊತೆಗೆ ರಹಾನೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. 

ಪಂದ್ಯ ಆರಂಭ: ಸಂಜೆ 4ಕ್ಕೆ
ಸ್ಥಳ: ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.