ADVERTISEMENT

ರಾಷ್ಟ್ರೀಯ ತಂಡಕ್ಕೆ ಮರಳಲು ವೇದಿಕೆ: ಅಕ್ಷರ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2016, 19:30 IST
Last Updated 5 ಏಪ್ರಿಲ್ 2016, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಗಳಿಸಲು ಐಪಿಎಲ್‌ ಪ್ರಮುಖ ವೇದಿಕೆಯಾಗಿದೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಬೇಕಾದ ಸವಾಲಿದೆ ಎಂದು ಕಿಂಗ್ಸ್‌ ಇಲೆವೆನ್ ತಂಡದ ಆಟಗಾರ ಅಕ್ಷರ್ ಪಟೇಲ್‌ ಹೇಳಿದ್ದಾರೆ.

22 ವರ್ಷದ ಅಕ್ಷರ್ 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 22 ಏಕದಿನ ಮತ್ತು ನಾಲ್ಕು ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

‘ಭಾರತ ತಂಡದಲ್ಲಿ ಸ್ಥಾನ ಗಳಿಸಲು ಈಗ ಸಾಕಷ್ಟು ಪೈಪೋಟಿ ಇದೆ. ಆದ್ದರಿಂದ ಕಠಿಣ ಅಭ್ಯಾಸವೂ ಅಗತ್ಯ ವಾಗಿದೆ. ಕೇವಲ ಬೌಲರ್ ಆಗಿ ಮಿಂಚಿ ದರೆ ಸಾಲದು. ಬ್ಯಾಟಿಂಗ್‌ನಲ್ಲಿ ಗಮ ನಾರ್ಹ ಸಾಧನೆ ತೋರುವ ಸವಾಲು ಇದೆ’ ಎಂದು ಅಕ್ಷರ್ ನುಡಿದರು.

ರಾಷ್ಟ್ರೀಯ ತಂಡದಲ್ಲಿದ್ದಾಗ ಅಕ್ಷರ್ ಉತ್ತಮ ಪ್ರದರ್ಶನ ತೋರಿದ್ದರು. ಆದರೆ ರವೀಂದ್ರ ಜಡೇಜ ಮತ್ತು ಎಡಗೈ ಸ್ಪಿನ್ನರ್‌ ಪವನ್ ನೇಗಿ ತಂಡದಲ್ಲಿ ಸ್ಥಾನ ಪಡೆದಾಗ ಅವರು ತಂಡದಿಂದ ಹೊರಗುಳಿದಿದ್ದರು.

‘ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವ ದೊಡ್ಡ ಆಸೆಯಿದೆ. ಆದ್ದರಿಂದ ಐಪಿಎಲ್ ಒಂಬತ್ತನೇ ಆವೃತ್ತಿ ನನಗೆ ತುಂಬಾ ಮುಖ್ಯವಾಗಿದೆ. ನಮ್ಮ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ಅವರಿಂದ ಉತ್ತಮ ಕೌಶಲಗಳನ್ನು ಕಲಿಯುತ್ತೇನೆ. ವಿಜಯ್‌ ಹಜಾರೆ ಟೂರ್ನಿಯಲ್ಲಿ ಸಾಮರ್ಥ್ಯ ಸಾಬೀತು ಮಾಡಿದ್ದರಿಂದ ನನ್ನಲ್ಲಿನ ವಿಶ್ವಾಸ ಹೆಚ್ಚಾಗಿದೆ. ಹೊಸ ಬೌಲಿಂಗ್ ಕೌಶಲ ಕಲಿಯಲು ಸಾಧ್ಯವಾಗಿದೆ’ ಎಂದು ಅಕ್ಷರ್‌ ಹೇಳಿದರು.

ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡದಲ್ಲಿ ಡೇವಿಡ್ ಮಿಲ್ಲರ್‌, ಜಾರ್ಜ್ ಬೇಲಿ ಮತ್ತು ಮಿಷೆಲ್ ಜಾನ್ಸನ್ ಅವರಂಥ ಅನುಭವಿ ಆಟಗಾರರಿದ್ದಾರೆ.
ಅಕ್ಷರ್ ಪಟೇಲ್‌ 2012ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. ಅವರು ಒಟ್ಟು 18 ಪಂದ್ಯಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.