ಚೆನ್ನೈ (ಪಿಟಿಐ): ಐಪಿಎಲ್ನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧದ ಎಂಟು `ಅಶಿಸ್ತು ಮತ್ತು ತಪ್ಪು' ಆರೋಪಗಳಲ್ಲಿ ಮೋದಿ ಅವರು ತಪ್ಪಿತಸ್ಥ ಎಂದು ಶಿಸ್ತು ಸಮಿತಿ ಹೇಳಿದ ಹಿನ್ನೆಲೆಯಲ್ಲಿ ಅವರಿಗೆ ಬುಧವಾರ ಬಿಬಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿದೆ.
ಅರ್ಧ ಗಂಟೆಗೂ ಕಡಿಮೆ ಸಮಯದಲ್ಲಿ ಮುಗಿದ ಮಂಡಳಿ ವಿಶೇಷ ಮಹಾಸಭೆಯಲ್ಲಿ ಮೋದಿ ವಿರುದ್ಧದ ಆಜೀವ ನಿಷೇಧ ಶಿಕ್ಷೆಯ ತೀರ್ಮಾನವನ್ನು ಸರ್ವಾನುಮತದಿಂದ ಪ್ರಕಟಿಸಲಾಯಿತು.
`ಬಿಬಿಸಿಐನ ವಿಶೇಷ ಮಹಾಸಭೆಯಲ್ಲಿ ಲಲಿತ್ ಮೋದಿಗೆ ಬಿಬಿಸಿಐನ ಶಿಸ್ತು ಸಮಿತಿಯು ಕಲಂ 32 (iv)ರ ನಿಯಮಗಳು ಮತ್ತು ನಿಬಂಧನೆಗಳ ಜ್ಞಾಪನಾ ಪತ್ರಕ್ಕೆ ಅನುಗುಣವಾಗಿ ಕಳುಹಿಸಿದ ಶೋಕಾಸ್ ನೋಟಿಸ್ ಕುರಿತ ವರದಿ ಮೇಲೆ ಚರ್ಚೆ ನಡೆಸಿ, ಅದನ್ನು ಪರಿಗಣಿಸಲಾಯಿತು' ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ಐಪಿಎಲ್ನ ಮೊದಲ ಮೂರು ಅವತರಣಿಕೆಗಳಲ್ಲಿ ಅಧ್ಯಕ್ಷರಾಗಿದ್ದರು. ಆದರೆ ಹಣಕಾಸು ಅವ್ಯವಹಾರ ಆರೋಪ ಕಾರಣ 2010ರಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಮೂರು ಸದಸ್ಯರ ಶಿಸ್ತು ಸಮಿತಿ ರಚಿಸಲಾಗಿತ್ತು. ಅದರಲ್ಲಿ ಅರುಣ್ ಜೇಟ್ಲಿ, ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಎನ್.ಶ್ರೀನಿವಾಸನ್ ಇದ್ದರು. ಆದರೆ ಶ್ರೀನಿವಾಸನ್ ಹಿಂದೆ ಸರಿದಿದ್ದರು.
ಹಾಗಾಗಿ ಅಂದಿನ ಐಪಿಎಲ್ ಅಧ್ಯಕ್ಷ ಚಿರಾಯು ಅಮಿನ್ ಅವರನ್ನು ಆ ಸಮಿತಿಗೆ ಸೇರಿಸಲಾಗಿತ್ತು. ಕೆಲ ದಿನಗಳ ನಂತರ ಅಮಿನ್ ಕೂಡ ಹಿಂದೆ ಸರಿದರು. ಈ ಕಾರಣ ಸಮಿತಿಯಲ್ಲಿ ಜೇಟ್ಲಿ ಹಾಗೂ ಸಿಂದಿಯಾ ಮಾತ್ರ ಇದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಇವರು 400 ಪುಟಗಳ ವರದಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.