ADVERTISEMENT

ಲೆಕ್ಕಾಚಾರ ಮಾಡುವ ಸಂಕಷ್ಟ!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಸಿಡ್ನಿ (ಪಿಟಿಐ): ಫೈನಲ್ ತಲುಪಲು ಲೆಕ್ಕಾಚಾರ ನಡೆದಿದೆ. ಭಾರತ ಕ್ರಿಕೆಟ್ ತಂಡಕ್ಕೆ ಇದು ಹೊಸ ಅನುಭವ ಏನಲ್ಲ. ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ಅದೇ ಸಂಕಷ್ಟಕ್ಕೆ ಕಾರಣ.

ಆಸ್ಟ್ರೇಲಿಯಾ (ಫೆಬ್ರುವರಿ 26) ಹಾಗೂ ಶ್ರೀಲಂಕಾ (ಮಾರ್ಚ್ 2) ವಿರುದ್ಧ ಗೆದ್ದರೂ ಭಾರತವು ಫೈನಲ್‌ಗೆ ಅರ್ಹತೆ ಪಡೆಯುತ್ತದೆಂದು ಹೇಳಲು ಆಗದು. ಕಾರಣ ಸಿಂಹಳೀಯರು ತಮ್ಮ ಬಾಕಿ ಮೂರು ಪಂದ್ಯಗಳಲ್ಲಿ ಎರಡನ್ನು ಜಯಿಸಿದರೂ ಪಾಯಿಂಟುಗಳ ಪಟ್ಟಿ ಯಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕಿಂತ ಮೇಲೆ ನಿಲ್ಲುತ್ತದೆ. ಆಸ್ಟ್ರೇಲಿಯಾ ಎದುರು ಇಲ್ಲಿಯೇ ಆಡಿದ್ದ ಪಂದ್ಯದಲ್ಲಿ ಬೋನಸ್ ಪಾಯಿಂಟ್ ಗಳಿಸಿದ್ದು ಅದಕ್ಕೆ ಸಹಕಾರಿ ಅಂಶವಾಗಿದೆ.

ಒಂದು ವೇಳೆ ಶ್ರೀಲಂಕಾ ಮುಂದಿನ ಮೂರು ಹಣಾಹಣಿಗಳಲ್ಲಿ ಎರಡು ಪಂದ್ಯಗಳಲ್ಲಿ ನಿರಾಸೆ ಹೊಂದಿದರೆ `ಮಹಿ~ ಬಳಗದ ಹಾದಿ ಸುಗಮ. ಹಾಗೆ ಆಗದೇ ಲಂಕಾ ಮೂರು ಪಂದ್ಯಗಳಲ್ಲಿ ಎರಡನ್ನು ಜಯಿಸಿಯೂ ಬೋನಸ್ ಪಾಯಿಂಟ್ ಗಳಿಸದಿದ್ದರೆ ಇನ್ನೊಂದು ಸಾಧ್ಯತೆಯ ಬಗ್ಗೆ ಯೋಚನೆ ಮಾಡಬಹುದು. ಅದು ಸಾಧ್ಯವಾಗುವುದು ಭಾರತ ತನ್ನ ಕೊನೆಯ ಎರಡು ಹಣಾಹಣಿಯಲ್ಲಿ ಬೋನಸ್ ಪಾಯಿಂಟ್ ಗಿಟ್ಟಿಸುವ ಮಟ್ಟದ ಆಟವಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭಾರತದವರು ಫೈನಲ್ ಕನಸು ಕೈಬಿಟ್ಟಿದ್ದಾರೆ ಎಂದು ಯೋಚನೆ ಮಾಡುವುದು ಸಹಜ. ಏಕೆಂದರೆ ಕ್ರಮವಾಗಿ 14 ಹಾಗೂ 11 ಪಾಯಿಂಟ್ಸ್ ಗಿಟ್ಟಿಸಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಲಾ ಮೂರು ಪಂದ್ಯ ಆಡುವುದು ಬಾಕಿ. ದೋನಿ ಬಳಗಕ್ಕೆ ಲಭ್ಯ ಇರುವುದು ಕೇವಲ ಎರಡು ಪಂದ್ಯಗಳು ಮಾತ್ರ. ಭಾನುವಾರ ಕಾಂಗರೂಗಳ ನಾಡಿನ ಕ್ರಿಕೆಟ್ ಪಡೆಗೆ ಶರಣಾದರೆ ಭಾರತದ ಆಸೆಗೆ ಸಂಪೂರ್ಣ ತೆರೆ. ಗೆದ್ದರೂ ಲೀಗ್‌ನಲ್ಲಿ ಗೆಲ್ಲಬೇಕಾದ ಒತ್ತಡವಂತೂ ತಪ್ಪುವುದಿಲ್ಲ.

ADVERTISEMENT

ಅನುಭವಿಗಳು ಎನಿಸಿಕೊಂಡವರು ತಂಡಕ್ಕೆ ಬಲ ನೀಡದಿರುವ ಕಾರಣ ಸರಣಿಯಲ್ಲಿ ಭಾರತ ಈಗ ಲೆಕ್ಕಾಚಾರ ಮಾಡುತ್ತಾ ಕುಳಿತುಕೊಳ್ಳುವಂತಾಗಿದೆ. ತನ್ನ ಗೆಲುವಿನ ಬಲದ ಮೇಲೆ ಫೈನಲ್ ತಲುಪುವ ಬದಲು; ಬೇರೆ ತಂಡದ ಸೋಲಿಗಾಗಿ ಕಾಯುವಂಥ ದುಸ್ಥಿತಿ. ದೋನಿ ಸ್ವಲ್ಪ ಪರವಾಗಿಲ್ಲ (5    ಇನಿಂಗ್ಸ್‌ಗಳಿಂದ 191 ರನ್). ಆದರೆ ಸಚಿನ್ ತೆಂಡೂಲ್ಕರ್ ಪಂದ್ಯ ಗೆಲ್ಲಿಸಿಕೊಡುವಂಥ ಆಟವಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.