ಕೊಲಂಬೊ (ಐಎಎನ್ಎಸ್): ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್ ಕ್ರಿಕೆಟ್ ನಂತರ ನಿವೃತ್ತಿ ಹೊಂದುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಫೆಬ್ರುವರಿ 19ರಿಂದ ನಡೆಯಲಿರುವ ವಿಶ್ವಕಪ್ ತಮ್ಮ ಕ್ರಿಕೆಟ್ ಜೀವನದ ಕೊನೆಯ ಟೂರ್ನಿ ಎಂದು ಮುರಳಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
38 ವರ್ಷ ವಯಸ್ಸಿನ ವಿಶ್ವಖ್ಯಾತ ಸ್ಪಿನ್ನರ್ ಕಳೆದ ವರ್ಷವೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ನಲ್ಲಿ ಎಂಟನೂರು ವಿಕೆಟ್ಗಳ ಸಾಧನೆ ಮಾಡಿರುವ ಅವರು ವಿಶ್ವಕಪ್ ಮುಗಿಯುವರೆಗೆ ಮಾತ್ರ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವರು. ಆನಂತರ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ಆಡಲಿದ್ದಾರೆ.
ಐಪಿಎಲ್ ತಂಡವಾದ ಕೊಚ್ಚಿಗೆ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಮುರಳಿ ಅವರು ಭಾರತದಲ್ಲಿ ಮಾತ್ರವಲ್ಲ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ನಲ್ಲಿಯೂ ಚುಟುಕು ಕ್ರಿಕೆಟ್ ಲೀಗ್ನಲ್ಲಿ ಆಡುವುದನ್ನು ಮುಂದುವರಿಸುವ ಆಶಯ ಹೊಂದಿದ್ದಾರೆ.
‘ವಿಶ್ವಕಪ್ ನಂತರ ಮುಂದುವರಿಯುವುದಿಲ್ಲ. ಇದೇ ನನಗೆ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿ’ ಎಂದು ಹೇಳಿದ ಆಫ್ ಸ್ಪಿನ್ನರ್ ‘ನನ್ನ ಕಾಲ ಮುಗಿಯಿತು. ಇಷ್ಟು ಸಾಕು; ವಿಶ್ವಕಪ್ ನಂತರ ಐಪಿಎಲ್ನಂಥ ಲೀಗ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೇನೆ. ಕ್ರಿಕೆಟ್ ಜೊತೆಗೆ ಸಂಪರ್ಕ ಉಳಿಸಿಕೊಳ್ಳುತ್ತೇನೆ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.