ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಹಾಗೂ ಜೈಗೋ ಸ್ಪೋರ್ಟ್ಸ್ ಲಿಮಿಟೆಡ್ ಆಶ್ರಯದಲ್ಲಿ ಮಾರ್ಚ್ 19ರಿಂದ 25ರ ವರೆಗೆ ನಗರದಲ್ಲಿ ಕ್ಯೂನೆಟ್ ಐಟಿಎಫ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ. ಆತಿಥೇಯ ಕರ್ನಾಟಕದ ಸ್ಫೂರ್ತಿ ಶಿವಲಿಂಗಯ್ಯ ಹಾಗೂ ಶರ್ಮದಾ ಬಾಲು ಅವರಿಗೆ `ವೈಲ್ಡ್ ಕಾರ್ಡ್~ ಪ್ರವೇಶ ಲಭಿಸಿದೆ.
`ಈ ಟೂರ್ನಿಯು 25 ಸಾವಿರ ಡಾಲರ್ ಬಹುಮಾನ ಒಳಗೊಂಡಿದೆ. ಭಾರತದ ಒಟ್ಟು ಏಳು ಸ್ಪರ್ಧಿಗಳು ಕಣಕ್ಕಿಳಿಲಿದ್ದಾರೆ~ ಎಂದು ಟೂರ್ನಿಯ ನಿರ್ದೇಶಕ ಹಾಗೂ ಜೈಗೊ ಸ್ಪೋರ್ಟ್ಸ್ನ ಸಿಇಒ ಸುನಿಲ್ ಯಜಮಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಈ ಟೂರ್ನಿ ಮೂರನೇ ಸಲ ನಡೆಯುತ್ತಿದ್ದು, 2009ರಲ್ಲಿ ಕರ್ನಾಟಕದ ಪೂಜಾಶ್ರೀ ವೆಂಕಟೇಶ್, 2010ರಲ್ಲಿ ಥಾಯ್ಲೆಂಡ್ನ ನಿಚಾ ಲೆರ್ಟ್ಪಿಟಕ್ಸಿನ್ ಚೈ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಪಂದ್ಯಗಳು ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆಯಲಿದ್ದು, 17 ಹಾಗೂ 18ರಂದು ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದೆ~ ಎಂದು ಅವರು ವಿವರಿಸಿದರು.
`ಅರ್ಹತಾ ಸುತ್ತಿನಲ್ಲಿ 26 ಹಾಗೂ ಪ್ರಧಾನ ಹಂತದಲ್ಲಿ 18 ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ. ಸಿಂಗಲ್ಸ್ನಲ್ಲಿ ಪ್ರಶಸ್ತಿ ಜಯಿಸುವವರು 2940 ಡಾಲರ್ ಬಹುಮಾನ ಹಾಗೂ 50 ಪಾಯಿಂಟ್, ರನ್ನರ್ ಅಪ್ ಸ್ಥಾನ ಪಡೆಯುವ ಸ್ಪರ್ಧಿ 1666 ಡಾಲರ್ ಹಾಗೂ 34 ಪಾಯಿಂಟ್ ಪಡೆದುಕೊಳ್ಳಲಿದ್ದಾರೆ~ ಎಂದು ತಿಳಿಸಿದರು.
ಕೆಎಸ್ಎಲ್ಟಿಎ ಜಂಟಿ ಕಾರ್ಯದರ್ಶಿ ಪಿ.ಆರ್. ರಾಮಸ್ವಾಮಿ, ಕ್ಯೂನೆಟ್ ಇಂಡಿಯಾದ ಸಿಇಒ ಸುರೇಶ್ ತಿಮಿರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.