ADVERTISEMENT

ಸಂತಸ ತಂದ ಸಹೋದರನ ಆಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:05 IST
Last Updated 24 ಫೆಬ್ರುವರಿ 2011, 18:05 IST

ವಿಶ್ವಕಪ್ ಕ್ರಿಕೆಟ್ ಉತ್ಸಾಹದಿಂದ ಸಾಗಿದೆ. ಎಲ್ಲ ತಂಡಗಳು ಹುಮ್ಮಸ್ಸಿ ನಿಂದ ಆಡುತ್ತಿವೆ. ನಾನು ಕೂಡ ಇಂಥದೊಂದು ದೊಡ್ಡ ಕ್ರಿಕೆಟ್ ಟೂರ್ನಿಯಲ್ಲಿ ಆಕರ್ಷಣೆಯ ಕೇಂದ್ರವಾಗಿರಬೇಕೆಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ಆದರೂ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲೆಂದು ನಿತ್ಯವೂ ಹಾರೈಸುತ್ತಿದ್ದೇನೆ. ಅಷ್ಟು ಮಾತ್ರ ನಾನು ಈಗ ಮಾಡಬಹುದು. ನಮ್ಮ ಆಯ್ಕೆಗಾರರು ಸೂಕ್ತವೆನಿಸುವ ತಂಡವನ್ನು ಕಟ್ಟಿ ಕಳುಹಿಸಿದ್ದಾರೆ. ಒಳಿತುಗಳ ನಿರೀಕ್ಷೆಯೊಂದಿಗೆ ಅವರು ತಂಡದ ಪ್ರತಿಯೊಬ್ಬ ಸದಸ್ಯನನ್ನು ಆಯ್ಕೆ ಮಾಡಿದ್ದಾರೆ. ನನ್ನದೇ ನಾಡಿನ ಇನ್ನೊಬ್ಬ ಯುವಕ ವಿಶ್ವಕಪ್‌ನಲ್ಲಿ ಆಡುವುದನ್ನು ನೋಡುವುದು ನನಗೆ ಅಸಹನೀಯವೆಂದು ಅನಿಸಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಾಗೆ ಖಂಡಿತ ಇಲ್ಲ. ನನ್ನ ಕಿರಿಯ ಸಹೋದರ ಆಡುವುದಕ್ಕೆ ಸಂತೋಷ ಪಡುತ್ತೇನೆ. ಡೇವಿಡ್ ಹಸ್ಸಿ ತಂಡದಲ್ಲಿ ಪ್ರಮುಖ ಪಾತ್ರ ಹೊಂದಿದ್ದಾನೆ. ಚೆನ್ನಾಗಿಯೂ ಆಡುತ್ತಿರುವುದು ಖುಷಿ ಎನಿಸಿದೆ. ನಿಜವಾಗಿಯೂ ಹೆಮ್ಮೆಯ ಅನುಭವವಿದು.

ಆಸ್ಟ್ರೇಲಿಯಾ ತಂಡವು ಅಭ್ಯಾಸ ಪಂದ್ಯದಲ್ಲಿ ನಿರೀಕ್ಷಿತ ಪರಿಣಾಮ ಪಡೆಯಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ಎದುರು ಮೊದಲ ಪಂದ್ಯದಲ್ಲಿ ಸ್ವಲ್ಪ ಕಷ್ಟಪಡಬೇಕಾಯಿತು. ಆದರೂ ವಿಶ್ವಾಸ ಕಳೆದುಕೊಂಡಿಲ್ಲ. ಉತ್ತಮ ಆಟದ ಬಲದೊಂದಿಗೆ ಟೂರ್ನಿಯಲ್ಲಿ ಬಹು ದೂರ ಸಾಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಭಾರತ ಹಾಗೂ ಉಪಖಂಡದಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದಕ್ಕೆ ತಕ್ಕ ತಯಾರಿಯನ್ನು ಮಾಡಿಕೊಂಡೇ ನಮ್ಮ ತಂಡವು ಆಸ್ಟ್ರೇಲಿಯಾದಿಂದ ಪ್ರಯಾಣ ಬೆಳೆಸಿತ್ತು. ವಿಶ್ವಕಪ್‌ನಲ್ಲಿನ ಆರಂಭ ಅಷ್ಟೊಂದು ಪ್ರಭಾವಿ ಆಗಿರಲಿಲ್ಲ. ಆದರೂ ಮುಂದೆ ವಿಶ್ವಾಸದಿಂದ ದಾಪುಗಾಲಿಟ್ಟು ಮತ್ತೆ ಯಶಸ್ಸಿನ ಎತ್ತರಕ್ಕೆ ಏರುವುದರಲ್ಲಿ ಅನುಮಾನವಿಲ್ಲ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆರಂಭದ ನಾಲ್ವರು ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿದರು. ಆದ್ದರಿಂದ ಸಕಾರಾತ್ಮಕ ಫಲಿತಾಂಶ ಸಾಧ್ಯವಾಯಿತು. ಎದುರಾಳಿ ಜಿಂಬಾಬ್ವೆಯವರು ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಪರಿಣಾಮಕಾರಿ ಆಗಿದ್ದನ್ನು ಕೂಡ ಮೆಚ್ಚಲೇಬೇಕು.

ನ್ಯೂಜಿಲೆಂಡ್ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯ ಮಾತ್ರ ಮಹತ್ವದ್ದು. ಇದೊಂದು ಪ್ರಬಲ ಹೋರಾಟದ ಪಂದ್ಯವಾಗಿರುತ್ತದೆಂದು ಖಂಡಿತ ನಿರೀಕ್ಷಿಸಬಹುದು. ನ್ಯೂಜಿಲೆಂಡ್ ಜನರು ಭೂಕಂಪದ ನಂತರ ನೊಂದಿದ್ದಾರೆ. ತಮ್ಮ ನಾಡಿನ ಜನರಿಗೆ ಸಂಕಷ್ಟ ಕಾಲದಲ್ಲಿ ಒಂದಿಷ್ಟು ಸಂತಸ ನೀಡುವ ಪ್ರಯತ್ನ ಮಾಡಲು ಕಿವೀಸ್ ತಂಡದವರು ಆಸಕ್ತರಾಗಿದ್ದಾರೆ.
 -ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.