ಲಂಡನ್ (ಪಿಟಿಐ): ‘ಓಹ್...ನೀನೇನು ಮಾಡಲು ಸಾಧ್ಯ...?’
-ಕಿಕ್ಕಿರಿದು ತುಂಬಿದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಚಿನ್ ತೆಂಡೂಲ್ಕರ್ ಸತತ ಎರಡು ಸಿಕ್ಸರ್ ಎತ್ತಿದಾಗ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಬಳಿ ತೆರಳಿದ ಸಹ ಆಟಗಾರ ಮ್ಯಾಟ್ ಪ್ರಯರ್ ಹೇಳಿದ ಮಾತಿದು.
ಹೀಗೆಂದು ಗಾರ್ಡಿಯನ್ ಪತ್ರಿಕೆಯಲ್ಲಿ ಆ್ಯಂಡಿ ಬುಲ್ ಬರೆದಿದ್ದಾರೆ. ‘ತೆಂಡೂಲ್ಕರ್ ಭಾನುವಾರ ಬೆಳಿಗ್ಗೆ ಹಾಸಿಗೆಯಿಂದ ಮೇಲೇಳುವಾಗಲೇ ಶತಕ ಹೊಡೆಯಬೇಕು ಎಂದು ತೀರ್ಮಾನಿಸಿದಂತಿತ್ತು. ಅಲ್ಲಿಂದ ಸಚಿನ್ ಅವರನ್ನು ನಿಯಂತ್ರಿಸಲು ಇಂಗ್ಲೆಂಡ್ ಬೌಲರ್ಗಳಿಗೆ ಸಾಧ್ಯವೇ ಆಗಲಿಲ್ಲ. ಬಳಿಕ ಆ್ಯಂಡ್ರ್ಯೂ ಸ್ಟ್ರಾಸ್ ಅದ್ಭುತ ಇನಿಂಗ್ಸ್ ಕಟ್ಟಿದ್ದು ಬೇರೆ ಮಾತು’ ಎನ್ನುತ್ತಾರೆ ಆ್ಯಂಡಿ.
ಬುಲ್ ಪ್ರಕಾರ ಭಾನುವಾರದ ಅರ್ಧ ದಿನ ಸಚಿನ್ಗೆ ಸೇರಿದ್ದು. ಇದಕ್ಕಾಗಿ ಇಡೀ ಭಾರತವೇ ಪ್ರಾರ್ಥಿಸಿತ್ತು. ಸಚಿನ್ 46 (ಭಾನುವಾರದ ಪಂದ್ಯಕ್ಕೆ ಮುನ್ನ) ಶತಕ ಗಳಿಸಿದ್ದನ್ನು ನೋಡಿ ಅಭಿಮಾನಿಗಳ ಆಸಕ್ತಿ ಕಡಿಮೆ ಆಗಿರಬೇಕಿತ್ತು. ಆದರೆ ಮತ್ತಷ್ಟು ಹಸಿವು ಹೆಚ್ಚಾಗಿದೆ. ಸಚಿನ್ ರನ್ ದಾಹದ ರೀತಿ ತೃಪ್ತಿಯೇ ಅಗುತ್ತಿಲ್ಲ.‘ನಮಗೇನು ಬೇಕು’? ಎಂದು ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕೂಗಿದರು. ತಕ್ಷಣ ‘ಸಿಕ್ಸರ್ ಬೇಕು’ ಎಂಬುದು ಅವರದ್ದೇ ಉತ್ತರ. ಆಗ ಪಾಲ್ ಕಾಲಿಂಗ್ವುಡ್ ಎಸೆತದಲ್ಲಿ ತೆಂಡೂಲ್ಕರ್ ಲಾಂಗ್ ಆನ್ನತ್ತ ಸಿಕ್ಸರ್ ಎತ್ತಿಯೇ ಬಿಟ್ಟರು. ನಂತರ ಮತ್ತೆ ನಾಲ್ಕು ಸಿಕ್ಸರ್ಗಳು ಬಂದವು. ಅದರಲ್ಲಿ ಸ್ವಾನ್ ಅವರ ಒಂದೇ ಓವರ್ನಲ್ಲಿ ಎರಡು ಸಿಕ್ಸರ್ ಎತ್ತಿದರು’ ಎಂದು ಅವರು ವಿವರಿಸಿದ್ದಾರೆ.
‘ತೆಂಡೂಲ್ಕರ್ ಅವರಿಂದ ಈ ರೀತಿಯ ಆಟ ನಿರೀಕ್ಷಿತ. ಆದರೆ ಸ್ಟ್ರಾಸ್ ಅವರನ್ನು ಕ್ರಿಕೆಟ್ ಪರಿಣತರು ಕಡೆಗಣಿಸಿದ್ದರು. ಅವರ ಕ್ರಿಕೆಟ್ ಜೀವನವನ್ನು ಮುಗಿಸಿದ್ದರು. ಅವರೆಲ್ಲಾ ಈಗ ತಮ್ಮ ನುಡಿಗಳ ಬಗ್ಗೆ ಯೋಚನೆ ಮಾಡಬೇಕು’ ಎಂದು ಬುಲ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.ವಿಶ್ವಕಪ್ ಇತಿಹಾಸದಲ್ಲಿ ಇದೊಂದು ಅದ್ಭುತ ಪಂದ್ಯ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.