ADVERTISEMENT

ಸವಾಲುಗಳೆಲ್ಲ ಅವಕಾಶಗಳು: ಗೌತಮ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 7:20 IST
Last Updated 18 ಡಿಸೆಂಬರ್ 2010, 7:20 IST

ಕಾನ್ಪುರ: ತಂಡ ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ನಿಂತು ಎದುರಿಸುವುದು 24ರ ಹರೆಯದ ಈ ಹುಡುಗನಿಗೆ ರೂಢಿಯಾಗಿಬಿಟ್ಟಿದೆ. ಇಡೀ ಋತುವಿನಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಕುಸಿದಾಗಲೆಲ್ಲ ಸಿ.ಎಂ. ಗೌತಮ್ ಬ್ಯಾಟ್ ಮೂಲಕ ತಮ್ಮ ಆಟ ತೋರಿಸಿದ್ದಾರೆ. ಕಾನ್ಪುರದಲ್ಲಿ  ಬುಧವಾರ ಆರಂಭವಾದ ರಣಜಿ ಟ್ರೋಫಿ ಸೂಪರ್ ಲೀಗ್ ಪಂದ್ಯದಲ್ಲಿ 135ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬಂದ ಮುರಳೀಧರನ್ ಗೌತಮ್ ಶತಕ ಬಾರಿಸಿದರು. ಜೊತೆಗೆ ತಂಡದ ಮೊತ್ತ 400ರ ಗಡಿ ದಾಟುವಂತೆ ಮಾಡಿದರು.

2008ರಲ್ಲಿ ಉತ್ತರ ಪ್ರದೇಶದ ವಿರುದ್ಧವೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗೌತಮ್‌ಗಿದು ಐದನೇ ಶತಕ. ಇದೇ ಋತುವಿನಲ್ಲಿ ಒಡಿಶಾ ವಿರುದ್ಧ ಬೆಂಗಳೂರಿನಲ್ಲಿ ಗಳಿಸಿದ್ದ 158 ರನ್ನುಗಳು ಅವರ ಶ್ರೇಷ್ಠ ಮೊತ್ತ. ಈ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಗೌತಮ್ ಧರ್ಮಶಾಲೆಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯ ಆಡಿರಲಿಲ್ಲ. ಆದರೆ ಮೈಸೂರಿನಲಿ ಬರೋಡಾ ಎದುರು ಮೊದಲ ಇನಿಂಗ್ಸ್‌ನಲ್ಲಿ ತಂಡವನ್ನು ಅಲ್ಪ ಮೊತ್ತದ ಅಪಾಯದಿಂದ ಪಾರು ಮಾಡಿದ್ದರು.

ಗುರುವಾರ ವಿಕೆಟ್ ಕೀಪಿಂಗ್‌ನಲ್ಲಿಯೂ ಎರಡು ಕ್ಯಾಚ್‌ಗಳನ್ನು ಪಡೆದು ಮಿಂಚಿದ ಗೌತಮ್ ದಿನದಾಟದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು.
“ಸವಾಲುಗಳನ್ನು ಅವಕಾಶಗಳಂತೆ ಸ್ವೀಕರಿಸುತ್ತೇನೆ. ಆದ್ದರಿಂ ದಲೇ ಕೆಳ ಕ್ರಮಾಂಕದಲ್ಲಿಯೂ ಆಡಲು ಸಾಧ್ಯವಾಗುತ್ತಿದೆ. ತಂಡ ಸಂಕಷ್ಟದಲ್ಲಿದ್ದಾಗ ಉತ್ತಮ ಆಡಿದಾಗ ಅದರಿಂದ ಸಿಗುವ ಖುಷಿಯೇ ಅದ್ಭುತ” ಎಂದು ಹೇಳುತ್ತಾರೆ ಗೌತಮ್.

ಬೌಲರ್‌ಗಳ ನಿದ್ದೆಗೆಡಿಸಿದ ಉದಿತ್: ಪ್ರಸಕ್ತ  ಋತುವಿನಲ್ಲಿ ತಮ್ಮ ಬೌಲಿಂಗ್ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಭಿಮನ್ಯು ಮಿಥುನ್ ಬೆನ್ನುನೋವಿನಿಂದ ಹೊರಗುಳಿದಾಗ ತಂಡದಲ್ಲಿ ಸ್ವಲ್ಪ ಮಟ್ಟಿನ ಆತಂಕವಿತ್ತು. ಆದರೆ ಆ ಕೊರತೆಯನ್ನು ಅವರ ಬದಲಿಗೆ ಬಂದ ಉದಿತ್ ಬ್ರಿಜೇಶ್ ಪಟೇಲ್ ಸಮರ್ಥವಾಗಿ ತುಂಬಿದರು! ಗುರುವಾರ 290 ರನ್ ಗಳಿಸಿದ್ದ ತಂಡದ ಮೊತ್ತ ನಾಲ್ಕನೂರು ದಾಟಲು ಗೌತಮ್ ಜೊತೆಗೆ ಉದಿತ್ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.