ನವದೆಹಲಿ (ಪಿಟಿಐ/ಐಎಎನ್ಎಸ್): ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಮುಂದುವರಿಸಲು ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡಲು ಸಹಾರಾ ಸಮೂಹ ವಿಧಿಸಿದ್ದ ಹೆಚ್ಚಿನ ಷರತ್ತುಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿಗೆ ನೀಡಿದೆ.
ಈ ಮೂಲಕ 12 ದಿನಗಳಿಂದ ಕಗ್ಗಂಟಾಗಿ ಪರಿಣಮಿಸಿದ್ದ ಬಿಕ್ಕಟ್ಟು ಬಗೆ ಹರಿದಿದೆ. ಈ ಬಗ್ಗೆ ಬಿಸಿಸಿಐ ಹಾಗೂ ಸಹಾರಾ ಗುರುವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. ಬಿಸಿಸಿಐ ನೀಡಿರುವ ಭರವಸೆಗೆ ಸಂತೋಷ ವ್ಯಕ್ತಪಡಿಸಿರುವ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಪ್ರಾಯೋಜಕತ್ವ ಮುಂದುವರಿಸಲು ಹಾಗೂ ಐಪಿಎಲ್ನಲ್ಲಿ ಆಡಲು ಹಸಿರು ನಿಶಾನೆ ತೋರಿಸಿದ್ದಾರೆ. `ಭಾರತ ಕ್ರಿಕೆಟ್ನ ಹಿತಾದೃಷ್ಟಿಯಿಂದ ಈ ನಿರ್ಧಾರ ಅಗತ್ಯವಾಗಿತ್ತು~ ಎಂದು ಅವರು ನುಡಿದಿದ್ದಾರೆ.
ಎಲ್ಲಾ ಫ್ರಾಂಚೈಸಿಗಳು ಒಪ್ಪಿಗೆ ನೀಡಿದರೆ ಸಹಾರಾ ಪುಣೆ ವಾರಿಯರ್ಸ್ ತಂಡದವರು ಐಪಿಎಲ್ ಐದನೇ ಅವತರಣಿಕೆಯಲ್ಲಿ ವಿದೇಶದ ಐದು ಮಂದಿ ಆಟಗಾರರನ್ನು ಕಣಕ್ಕಿಳಿಸಲು ಅಡ್ಡಿ ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅನಾರೋಗ್ಯಕ್ಕೆ ಒಳಗಾಗಿರುವ ಯುವರಾಜ್ ಸಿಂಗ್ ಅಲಭ್ಯರಾಗಿರುವ ಕಾರಣ ಪುಣೆ ವಾರಿಯರ್ಸ್ ತಂಡ ಈ ಮನವಿ ಮಾಡಿತ್ತು.
ಐಪಿಎಲ್ ಆಟಗಾರರ ಹಸ್ತಾಂತರ ಪ್ರಕ್ರಿಯೆಯನ್ನು ಫೆ. 29ರವರೆಗೆ ವಿಸ್ತರಿಸಲಾಗಿದೆ. ಪುಣೆ ವಾರಿಯರ್ಸ್ ಉಳಿದ ಫ್ರಾಂಚೈಸಿಗಳೊಂದಿಗೆ ಸಮಾಲೋಚಿಸಿ ಆಟಗಾರರನ್ನು ಖರೀದಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.