ನವದೆಹಲಿ: ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಇಎಸ್ಪಿನ್ನ ವರ್ಷದ ಅತ್ಯುತ್ತಮ ಕ್ರೀಡಾಪಟುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಉತ್ತಮ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುರುಷರ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದ ಶ್ರೀಕಾಂತ್ ಈ ವರ್ಷ ಒಟ್ಟು ನಾಲ್ಕು ಸೂಪರ್ ಸೀರಿಸ್ ಪ್ರಶಸ್ತಿಗಳನ್ನು ಗೆದ್ದಿದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ನಾಲ್ಕನೇ ಆಟಗಾರ ಎಂದೆನಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ ಪ್ರಶಸ್ತಿಗೆ ಭಾಜನರಾಗಿರುವ ಸಿಂಧು ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ನಂತರ ಉತ್ತಮ ಲಯದಲ್ಲಿ ಮುಂದುವರಿದಿದ್ದಾರೆ. ಈ ವರ್ಷ ಇಂಡಿಯನ್ ಮತ್ತು ಕೊರಿಯನ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾರತ ಮಹಿಳಾ ಹಾಕಿ ತಂಡವನ್ನು ವರ್ಷದ ತಂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 13 ವರ್ಷಗಳ ನಂತರ ಏಷ್ಯಾ ಕಪ್ ಗೆದ್ದ ಸಾಧನೆಗೆ ಈ ಗೌರವ ಸಂದಿದೆ.
ವರ್ಷದ ಸಾಧಕ ಪ್ರಶಸ್ತಿಗೆ ಸಾರ್ವಜ ನಿಕರಿಂದ ಅಭಿಪ್ರಾಯ ಪಡೆಯಲಾಗಿತ್ತು. 17 ವರ್ಷದೊಳಗಿನವರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ದೇಶದ ಮೊತ್ತಮೊದಲ ಗೋಲು ಗಳಿಸಿದ ಜೀಕ್ಸನ್ ಸಿಂಗ್ಗೆ ಈ ಪ್ರಶಸ್ತಿ ಲಭಿಸಲಿದೆ.
ಅಭಿನವ್ ಬಿಂದ್ರಾ, ಸೋಮದೇವ್ ದೇವವರ್ಮನ್, ಬೈಚುಂಗ್ ಭುಟಿಯಾ, ರೋಹಿತ್ ಬ್ರಿಜ್ನಾಥ್, ವೆಂಕಟೇಶನ್ ದೇವರಾಜನ್, ನಿಶಾ ಮಿಲೆಟ್, ಅಪರ್ಣಾ ಪೋಪಟ್, ಜಗದೀಶ್ ಕಾಲಿರಾಮನ್, ಮನೀಷ ಮಲ್ಹೋತ್ರ ಹಾಗೂ ಅಂಜು ಬಾಬಿ ಜಾರ್ಜ್ ಅವರು ಆಯ್ಕೆ ಸಮಿತಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.