ADVERTISEMENT

ಸೆಮಿಫೈನಲ್‌ಗೆ ಮೋಹಿತ್‌

ಟೆನಿಸ್: ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಯುವ ಪ್ರತಿಭೆ ಮೋಹಿತ್‌ ಮಯೂರ್‌ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ, ಡಿಎಸ್‌ ಮ್ಯಾಕ್ಸ್‌ ಎಐಟಿಎ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಆತಿಥೇಯ ಕರ್ನಾಟಕದ ಹೋರಾಟಕ್ಕೆ ತೆರೆ ಬಿದ್ದಿದೆ.
ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ಗುರುವಾರ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಮೋಹಿತ್‌ 6–3, 6–2ರಲ್ಲಿ ರಿಷಬ್‌ ಅಗರ್‌ವಾಲ್‌ ಎದುರು ಗೆಲುವಿನ ನಗೆ ಬೀರಿದರು.

ಇದೇ ವಿಭಾಗದ ಇನ್ನಷ್ಟು ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಹಾರಾಷ್ಟ್ರದ ನಿತಿನ್‌ ಕೆ. 7–5, 7–5ರಲ್ಲಿ ವಿನೋದ್‌ ಶ್ರೀಧರ್‌ ಮೇಲೂ, ಚಂದ್ರಿಲಾ ಸೂಡ್‌ 6–4, 6–3ರಲ್ಲಿ ಲಕ್ಷಿತ್ ಸೂಡ್‌ ವಿರುದ್ಧವೂ, ರಿಷಬ್‌ದೇವ್‌ ರಮಣ್‌ 7–5ರಲ್ಲಿ ವಿಜಯ್‌ ಕಣ್ಣನ್‌ (ನಿವೃತ್ತಿ) ಮೇಲೂ ಗೆಲುವು ಪಡೆದು ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನ ಇನ್ನಷ್ಟು ಪಂದ್ಯಗಳಲ್ಲಿ ಮನು ಬಜಪೈ 6–1, 6–4ರಲ್ಲಿ ಎಸ್‌. ವಿನೋದ್‌ ಮೇಲೂ, ಲಕ್ಷಿತ್‌ 6–3, 6–0ರಲ್ಲಿ ಫಾರೀಜ್‌ ಮಹಮ್ಮದ್‌ ಮೇಲೂ, ಆರ್‌. ರಿಷಬ್‌ದೇವ್‌ 6–0, 3–6, 6–1ರಲ್ಲಿ ಶೇಖ್‌ ಅಬ್ದುಲ್ಲಾ ವಿರುದ್ಧವೂ, ಎ. ರಿಷಬ್‌ 6–0, 5–5ರಲ್ಲಿ ಸೂರಜ್‌ ಆರ್‌. ಪ್ರಭೋದ್‌ (ನಿವೃತ್ತಿ) ಮೇಲೂ, ಕೆ. ವಿಜಯ್‌ 6–1, 1–6, 6–3ರಲ್ಲಿ ರಮೇಶ್‌ ವಿಘ್ನೇಶ್ವರನ್‌ ವಿರುದ್ಧವೂ, ಮೋಹಿತ್‌ 6–2, 6–3ರಲ್ಲಿ ವಿಘ್ನೇಶ್ ವೀರಭದ್ರನ್‌ ಎದುರು ಗೆಲುವಿನ ನಗೆ ಚೆಲ್ಲಿದರು.

ಆತಿಥೇಯ ರಾಜ್ಯದ ಭರವಸೆ ಎನಿಸಿದ್ದ ಬಿ.ಆರ್‌. ನಿಕ್ಷೇಪ್‌ ಸಹ ಪ್ರೀ ಕ್ವಾರ್ಟರ್‌ನಲ್ಲಿ ಸೋಲು ಕಂಡಿದ್ದು ನಿರಾಸೆಗೆ ಕಾರಣವಾಯಿತು. ಮೊದಲ ಸುತ್ತಿನ ಪಂದ್ಯದಲ್ಲಿ ಸಾಗರ್‌ ಮಂಜಣ್ಣ ಎದುರು ‘ವೈಲ್ಡ್‌ ಕಾರ್ಡ್‌’ ಪ್ರವೇಶ ಪಡೆದಿದ್ದ ನಿಕ್ಷೇಪ್‌ ಜಯ ಪಡೆದಿದ್ದರು. ಪ್ರಗತಿಗೆ ನಿರಾಸೆ: ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಗತಿ ನಟರಾಜನ್ ಮತ್ತು ಆಶಾ ನಂದ ಕುಮಾರ್‌ ನಿರಾಸೆ ಅನುಭವಿಸಿದರು.

ಗುರುವಾರ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಅದ್ಯ್ನಾ ನಾಯ್ಕ್‌ 6–4, 6–1ರಲ್ಲಿ ಪ್ರಗತಿ ಮೇಲೂ, ರಿಯಾ ಭಾಟಿಯಾ 6–3, 6–3ರಲ್ಲಿ ಆಶಾ ವಿರುದ್ಧವೂ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸಾಯಿ ಸಂಹಿತಾ 6–3, 6–4ರಲ್ಲಿ ಅಮೃತಾ ಮುಖರ್ಜಿ ಎದುರು ಜಯ ಸಾಧಿಸಿ ನಾಲ್ಕರ ಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.