ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ತಂಡದವರು ಇಲ್ಲಿ ಮುಕ್ತಾಯಗೊಂಡ ಡಿ.ಎಸ್. ಮೂರ್ತಿ ಹಾಗೂ ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ 4-1ಗೋಲುಗಳಿಂದ ಡಿವೈಎಸ್ಎಸ್ ತಂಡವನ್ನು ಮಣಿಸಿ ಚಾಂಪಿಯನ್ ಆದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ವಿಜಯಿ ತಂಡದ ದರ್ಶನ್ 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ಮೂರು ನಿಮಿಷದ ನಂತರ ಮತ್ತೊಂದು ಗೋಲು ಇದೇ ಆಟಗಾರನಿಂದ ಬಂತು.
ನಂತರ ಮನು ಪಾಟೀಲ್ ಹಾಗೂ ನಿಕಿನ್ ತಿಮ್ಮಯ್ಯ ಕ್ರಮವಾಗಿ 33 ಮತ್ತು 54ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. ಡಿವೈಎಸ್ಎಸ್ ತಂಡದ ಏಕೈಕ ಗೋಲನ್ನು ಕುಶ 52ನೇ ನಿಮಿಷದಲ್ಲಿ ತಂದಿಟ್ಟರು.
ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಬಿಇಎಂಎಲ್ ತಂಡ 3-2ಗೋಲುಗಳಿಂದ ಎಚ್ಎಎಲ್ ತಂಡವನ್ನು ಸೋಲಿಸಿತು.
ವೈಯಕ್ತಿಕ ಪ್ರಶಸ್ತಿಗಳು: ಜಗದೀಪ್ ದಯಾಳ್ (ಬೆಸ್ಟ್ ಗೋಲ್ ಕೀಪರ್), ಬಸಂತ್ ಟರ್ಕಿ (ಬೆಸ್ಟ್ ಬ್ಯಾಕ್), ನಾಗಸೇನಿ (ಬೆಸ್ಟ್ ಹಾಫ್) ಮತ್ತು ಕುಶ (ಬೆಸ್ಟ್ ಫಾರ್ವಡ್). ದರ್ಶನ್ (ಟೂರ್ನಿಯ ಶ್ರೇಷ್ಠ ಆಟಗಾರ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.