ADVERTISEMENT

ಹಾಕಿ: ಪಿಸಿಟಿಸಿಗೆ ವಿಜಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಬೆಂಗಳೂರು: ಪಿಸಿಟಿಸಿ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಿಸಿಟಿಸಿ 6-2ಗೋಲುಗಳಿಂದ ಪೋಸ್ಟಲ್ ಎದುರು ಟೈ ಬ್ರೇಕರ್‌ನಲ್ಲಿ ವಿಜಯ ಸಾಧಿಸಿತು.

ನಿಗದಿತ ಅವಧಿಯಲ್ಲಿ ಎರಡೂ ತಂಡದವರು ತಲಾ ಎರಡು ಗೋಲುಗಳನ್ನು ಗಳಿಸಿದ್ದರು. ಪಿಸಿಟಿಸಿ ತಂಡದ ಜೆ. ಪೂರ್ತಿ 14ನೇ  ನಿಮಿಷದಲ್ಲಿ ಗೋಲಿನ ಖಾತೆ ತೆರೆದು ಆರಂಭಿಕ ಮುನ್ನಡೆ ತಂದುಕೊಟ್ಟರು.

ಇದಕ್ಕೆ ತಿರುಗೇಟು ನೀಡಿದ ಪೋಸ್ಟಲ್‌ನ ಚಾಲ್ಕೆ 26ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ಇದೇ ತಂಡದ ನವೀನ್ ಶೇಖರ್ ನಾಲ್ಕು ನಿಮಿಷಗಳ ಅಂತರದಲ್ಲಿ ಗೋಲು ಕಲೆ ಹಾಕಿ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿದರು. 

 ದ್ವಿತಿಯಾರ್ಧದಲ್ಲಿ ಪಿಸಿಟಿಸಿಯ ಕೆರ್ಕೆಟ್ಟಾ 56ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.
ಇದರಿಂದ ಎರಡೂ ತಂಡಗಳ ಗೋಲುಗಳ ಸಂಖ್ಯೆ 2-2ರಲ್ಲಿ ಸಮಬಲವಾಯಿತು. ನಂತರ ಟೈ ಬ್ರೇಕರ್‌ನಲ್ಲಿ ಪಿಸಿಟಿಸಿ ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.