ಮುಂಬೈ (ಪಿಟಿಐ): ಏಷ್ಯಾಕಪ್ನಲ್ಲಿ ನೀರಸ ಪ್ರದರ್ಶನ ತೋರಿ ಒತ್ತಡಕ್ಕೆ ಸಿಲುಕಿರುವ ಭಾರತ ತಂಡ ಐಸಿಸಿ ವಿಶ್ವಕಪ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯನ್ನಾಡಲು ಮಾರ್ಚ್ 14ರಂದು ಬಾಂಗ್ಲಾದೇಶಕ್ಕೆ ತೆರಳಲಿದೆ.
ವಿಶ್ವಕಪ್ ಟೂರ್ನಿ 16ರಂದು ಆರಂಭವಾಗಲಿದ್ದು, 21ರಂದು ಮೀರ್ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಭಾರತ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ತಾನ ವನ್ನು ಎದುರಿಸಲಿದೆ. 20ರ ವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಭಾರತ 2007ರ ಚೊಚ್ಚಲ ಟ್ವೆಂಟಿ–20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿತ್ತು.
ಪ್ರತಿ ಪ್ರವಾಸಕ್ಕೂ ಮುನ್ನ ತಂಡದ ನಾಯಕ ಹಾಗೂ ಕೋಚ್ ಪತ್ರಿಕಾಗೋಷ್ಠಿ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಸುದ್ದಿಗೋಷ್ಠಿ ನಡೆಯುವುದು ಖಚಿತವಾಗಿಲ್ಲ. ‘ನಾಯಕ ದೋನಿ ಹಾಗೂ ಕೋಚ್ ಡಂಕನ್ ಫ್ಲೆಚರ್ ಪತ್ರಿಕಾಗೋಷ್ಠಿ ನಡೆಸುವುದು ಖಚಿತವಾಗಿಲ್ಲ. ಢಾಕಾಕ್ಕೆ ತೆರಳಿದ ನಂತರವಷ್ಟೇ ಅಲ್ಲಿ ಗೋಷ್ಠಿ ನಡೆಸಲಾಗುವುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಇತ್ತೀಚೆಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶಕ್ಕೆ ತೆರಳಿತ್ತು. ಆದರೆ ಈ ಟೂರ್ನಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದ ತಂಡ ಫೈನಲ್ ಪ್ರವೇಶಿಸಲು ವಿಫಲಗೊಂಡಿತ್ತು. ಶ್ರೀಲಂಕಾ ತಂಡ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.