ಬೆಂಗಳೂರು: ಲೀಗ್ ಹಂತದಲ್ಲಿ ಪರಿಣಾಮಕಾರಿ ಆಟವಾಡಿದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಮಂಗಳವಾರ ರಾಜಸ್ತಾನವನ್ನು ಎದುರಿಸಲಿದೆ. ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗ
ಣದಲ್ಲಿ ಪಂದ್ಯ ನಡೆಯಲಿದೆ.
ಲೀಗ್ ಹಂತದ ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ 49 ರನ್ಗಳ ಗೆಲುವು ಸಾಧಿಸಿದ್ದ ಕರ್ನಾಟಕ ನಂತರ ಎಡವಿತ್ತು. ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಸೋತಿತ್ತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪ್ರಯಾಸದಿಂದ ಗೆದ್ದಿತ್ತು. 205 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಹೈದರಾಬಾದ್ ಒಂದು ಹಂತದಲ್ಲಿ ಸುಲಭ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಅಂತಿಮ ಓವರ್ಗಳಲ್ಲಿ ಚಾಣಾಕ್ಷತನ ಮೆರೆದ ಕರ್ನಾಟಕ ಜಯವನ್ನು ಕಸಿದುಕೊಂಡಿತ್ತು.
ಈ ಮೂರು ಪಂದ್ಯಗಳಲ್ಲಿ ಅನು ಭವಿಸಿದ ಏಳು–ಬೀಳುಗಳಿಂದ ಪಾಠ ಕಲಿತ ತಂಡ ನಂತರ ತಮಿಳುನಾಡು ಎದುರಿನ ಪಂದ್ಯದಲ್ಲಿ 78 ರನ್ಗಳ ಗೆಲುವು ಸಾಧಿಸಿ ಭರವಸೆ ಹೆಚ್ಚಿಸಿಕೊಂಡಿತ್ತು.
ಕೇರಳವನ್ನು 20 ರನ್ಗಳಿ ಮಣಿಸಿ ಸೂಪರ್ ಲೀಗ್ಗೆ ಪ್ರವೇಶ ಪಡೆದುಕೊಂಡಿತ್ತು. ಪಂಜಾಬ್ ವಿರುದ್ಧದ ಕೊನೆಯ ಲೀಗ್ ಪಂದ್ಯ ರೋಮಾಂಚಕ ಅಂತ್ಯ ಕಂಡಿತ್ತು. ಪಂದ್ಯ ಟೈ ಆದ ಕಾರಣ ಕ್ವಾಲಿಫೈಯರ್ ಓವರ್ ಮೂಲಕ ಫಲಿತಾಂಶ ನಿರ್ಣಯಿಸಲಾಯಿತು. ಕರ್ನಾಟಕ ಸೋತಿತ್ತು. ಹಳೆಯ ತಪ್ಪುಗಳನ್ನು ಮರೆತು ಸಾಂಘಿಕ ಪ್ರಯತ್ನ ನಡೆಸಿ ಮಂಗಳವಾರದ ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ ತಂಡ.
ಪಂದ್ಯ ಆರಂಭ: ಬೆಳಿಗ್ಗೆ 8.45.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.