ADVERTISEMENT

ರೋಜರ್ ಬಿನ್ನಿ ಬಣ ಕ್ಲೀನ್‌ಸ್ವೀಪ್

ಅಭಿರಾಮ್ ಉಪಾಧ್ಯಕ್ಷ, ಸಂತೋಷ್ ಮೆನನ್ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:40 IST
Last Updated 3 ಅಕ್ಟೋಬರ್ 2019, 19:40 IST
   

ಬೆಂಗಳೂರು: ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ನೇತೃತ್ವದ ಬಳಗವು ಗುರುವಾರ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಸಮಿತಿಯ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್ ಮಾಡಿತು.

1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ಆಲ್‌ರೌಂಡರ್ ಬಿನ್ನಿ ಅಧ್ಯಕ್ಷರಾಗಿ ಚುನಾಯಿತರಾದರು. ಬಿನ್ನಿ ಅವರು 943 ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಕ್ಯಾಪ್ಟನ್ ಎಂ.ಎಂ. ಹರೀಶ್ ಅವರು 111 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಜೆ. ಅಭಿರಾಮ್ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ ಆಯ್ಕೆಯಾದರು. ಖಜಾಂಚಿಯಾಗಿ ವಿನಯ್ ಮೃತ್ಯುಂಜಯ್ ಆಯ್ಕೆಯಾದರು.

1069 ಸದಸ್ಯರಿಂದ ಮತದಾನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗುರುವಾರ ನಡೆದ ಚುನಾವಣೆಯಲ್ಲಿ 1069 ಸದಸ್ಯರು ಮತದಾನ ಮಾಡಿದರು.

ADVERTISEMENT

ಬೆಳಿಗ್ಗೆ 10.30ರಿಂದ ಅರ್ಧ ಗಂಟೆ ಕಾಲ ಸರ್ವಸದಸ್ಯರ ಸಭೆ ನಡೆಯಿತು. ಸುಮಾರು 11 ಗಂಟೆಗೆ ಮತದಾನ ಆರಂಭವಾಯಿತು. ಸಂಜೆ ಏಳು ಗಂಟೆಗೆ ಮುಕ್ತಾಯವಾಯಿತು. ಎಂಟು ಗಂಟೆಯಿಂದ ಮತ ಎಣಿಕೆ ಶುರುವಾಯಿತು.

ದಿಗ್ಗಜರ ಮತದಾನ: ರಾಜ್ಯದ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೂ ಆಗಿರುವ ರೋಜರ್ ಬಿನ್ನಿ, ವೆಂಕಟೇಶ್ ಪ್ರಸಾದ್, ದೊಡ್ಡಗಣೇಶ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್, ಆಡಳಿತಗಾರ ಕಸ್ತೂರಿ ರಂಗನ್ ಅವರು ಸೇರಿದಂತೆ ರಾಜ್ಯದ ಹಲವಾರು ಹಿರಿಯ ಕ್ರಿಕೆಟಿಗರು ಮತದಾನ ಮಾಡಿದರು.

‘ಕೆಎಸ್‌ಸಿಎಯಿಂದ ಬಿಸಿಸಿಐ ಪ್ರತಿನಿಧಿಯಾಗಿ ಬ್ರಿಜೇಶ್ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ. ಇಂದು ನಡೆದ ಎಜಿಎಂನಲ್ಲಿ ಎಲ್ಲರೂ ಸಮ್ಮತಿಸಿದ್ದಾರೆ. ಆಡಳಿತ ಸಮಿತಿಯ ಸಭೆಯಲ್ಲಿ ಅನುಮೋದನೆ ಸಿಕ್ಕ ಮೇಲೆ ಬಿಸಿಸಿಐಗೆ ನಾಮನಿರ್ದೇಶನ ಪತ್ರ ಸಲ್ಲಿಸುತ್ತೇವೆ. ಬ್ರಿಜೇಶ್ ಅವರು ಬಿಸಿಸಿಐ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸ್ಪರ್ಧಿಸುವರು’ ಎಂದು ನೂತನ ಕಾರ್ಯದರ್ಶಿ ಸಂತೋಷ್ ಮೆನನ್ ಸುದ್ದಿಗಾರರಿಗೆ ತಿಳಿಸಿದರು.

ವಿಜೇತರು: ರೋಜರ್ ಬಿನ್ನಿ (ಅಧ್ಯಕ್ಷ), ಜೆ.ಅಭಿರಾಮ್ (ಉಪಾಧ್ಯಕ್ಷ), ಸಂತೋಷ್ ಮೆನನ್ (ಕಾರ್ಯದರ್ಶಿ), ಶಾವೀರ್ ತಾರಾಪೂರ್ (ಜಂಟಿ ಕಾರ್ಯದರ್ಶಿ), ವಿನಯ್ ಮೃತ್ಯುಂಜಯ (ಖಜಾಂಚಿ), ಶಾಂತಿ ಸ್ವರೂಪ್, ವಿ.ಎಸ್. ಜೈಸಿಂಗ್ (ಆಜೀವ ಸದಸ್ಯರು), ಕೋಟಾ ಎಸ್. ಕೋದಂಡರಾಮ್, ತಿಲಕನಾಯ್ಡು, ಶಾಂತಾ ರಂಗಸ್ವಾಮಿ (ಬೆಂಗಳೂರು ವಲಯ–ಸಂಸ್ಥೆ ಪ್ರತಿನಿಧಿತ್ವ). ರತನ್ ಕುಮಾರ್ (ಮಂಗಳೂರು ವಲಯ), ಸುಧೀಂದ್ರ ಶಿಂಧೆ (ರಾಯಚೂರು).

ಅವಿರೋಧ ಆಯ್ಕೆ: ಸುಧಾಕರ್ ರೈ (ಮೈಸೂರು), ಕೆ. ಶಶಿಧರ್ (ತುಮಕೂರು), ಅವಿನಾಶ್ ಪೋತದಾರ (ಧಾರವಾಡ), ಡಿ.ಎಸ್. ಅರುಣ್ (ಶಿವಮೊಗ್ಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.