ನವದೆಹಲಿ (ಪಿಟಿಐ): ದೇಶದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಕೇವಲ ₹1 ಲಕ್ಷ ದೇಣಿಗೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಕೊರೊನಾ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಲಾಕ್ಡೌನ್ ಆದೇಶ ಹೊರಡಿಸಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪುಣೆಯ 100 ಕುಟುಂಬಗಳಿಗೆ ನೆರವಾಗಲು ಮುಂದಾಗಿರುವ ಎನ್ಜಿಒಗೆ ಧೋನಿ, ಒಂದು ಲಕ್ಷ ರೂಪಾಯಿ ನೀಡಿದ್ದರು. ಹೀಗಾಗಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
‘ವಾರ್ಷಿಕ ₹ 800 ಕೋಟಿ ನಿವ್ವಳ ಆದಾಯ ಗಳಿಸುವ ಧೋನಿ, 100 ಕುಟುಂಬಗಳಿಗೆ 14 ದಿನಗಳ ಕಾಲ ಆಹಾರ ಮತ್ತು ಇತರ ಸೌಕರ್ಯ ಒದಗಿಸಲು ಮುಂದಾಗಿರುವ ಪುಣೆಯ ಎನ್ಜಿಒಗೆ ಕೊಟ್ಟಿದ್ದು ಕೇವಲ ಒಂದು ಲಕ್ಷ. ಇದೆಂತಾ ವಿಪರ್ಯಾಸ’ ಎಂದು ನಿರ್ಮಲಾ ತಾಯ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
‘ಸ್ವಿಟ್ಜರ್ಲೆಂಡ್ನ ಟೆನಿಸ್ ತಾರೆ ರೋಜರ್ ಫೆಡರರ್, ಕೊರೊನಾ ವಿರುದ್ಧ ಸಮರ ಸಾರಿರುವ ಸ್ವಿಸ್ ಸರ್ಕಾರಕ್ಕೆ ಸುಮಾರು ₹ 8 ಕೋಟಿ ದೇಣಿಗೆ ನೀಡಿದ್ದರೆ, ಸಾವಿರಾರು ಕೋಟಿಯ ಒಡೆಯರಾಗಿರುವ ಧೋನಿ ಕೇವಲ ಒಂದು ಲಕ್ಷ ಕೊಟ್ಟಿದ್ದಾರೆ. ಎಲ್ಲರೂ ಫೆಡರರ್ ಅವರನ್ನು ನೋಡಿ ಕಲಿಯಬೇಕು’ ಎಂದು ನರೇಂದ್ರ ಸಿಂಗ್ ರಾಥೋಡ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
‘ಧೋನಿ ಕೊಟ್ಟಿರುವುದೇ ಒಂದು ಲಕ್ಷ ರೂಪಾಯಿ. ಅದನ್ನೇ ಈ ಮಾಧ್ಯಮಗಳು ದೊಡ್ಡ ಸಾಧನೆ ಎಂಬಂತೆ ಸುದ್ದಿ ಬಿತ್ತರಿಸಿ ಅವರನ್ನು ಹೀರೊ ಮಾಡುತ್ತಿವೆ. ಇವರಿಗೆಲ್ಲಾ ನಾಚಿಕೆಯಾಗಬೇಕು’ ಎಂದು ಮತ್ತೊಬ್ಬರು ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.