ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಏಕಾಂಗಿ ಹೋರಾಟ ನೀಡಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಶತಕವು ವ್ಯರ್ಥವಾಗಿದೆ. ಸಂಜು ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸುವುದರೊಂದಿಗೆ ರಾಜಸ್ಥಾನ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. 63 ಎಸೆತಗಳನ್ನು ಎದುರಿಸಿದ ಸಂಜು 119 ರನ್ ಗಳಿಸಿ ಔಟಾದರು.
ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಸಂಜು ಸ್ಯಾಮ್ಸನ್ ಕೇವಲ 54 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಈ ಮೂಲಕ ಐಪಿಎಲ್ನಲ್ಲಿ ಮೂರನೇ ಶತಕವನ್ನು ಬಾರಿಸಿದರು.
ಅಂತಿಮ 4 ಓವರ್ಗಳಲ್ಲಿ ರಾಜಸ್ಥಾನ ಗೆಲುವಿಗೆ 48 ರನ್ಗಳ ಅವಶ್ಯಕತೆಯಿದೆ.
ಅಂತಿಮ 5 ಓವರ್ಗಳಲ್ಲಿ ರಾಜಸ್ಥಾನ ಗೆಲುವಿಗೆ 68 ರನ್ ಬೇಕಾಗಿದೆ.
ಈ ನಡುವೆ ಸಂಜು ಹಾಗೂ ಶಿವಂ ದುಬೆ ಅರ್ಧಶತಕದ ಜೊತೆಯಾಟ ನೀಡಿದರು. ಆದರೆ 23 ರನ್ ಗಳಿಸಿದ ದುಬೆ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿರುವುದು ರಾಜಸ್ಥಾನಕ್ಕೆ ಹಿನ್ನೆಡೆಯಾಗಿ ಪರಿಣಮಿಸಿದೆ.
ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರು. ಈ ಮೂಲಕ ನಾಯಕರಾದ ಪದಾರ್ಪಣೆ ಪಂದ್ಯದಲ್ಲೇ ಫಿಫ್ಟಿ ಸಾಧನೆ ಮಾಡಿದರು.
10 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ ರಾಯಲ್ಸ್ ಮೂರು ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ. ರಾಜಸ್ಥಾನ ತಂಡವು ಬೆನ್ ಸ್ಟೋಕ್ಸ್ (0), ಮನನ್ ವೋಹ್ರಾ (12) ಹಾಗೂ ಜೋಸ್ ಬಟ್ಲರ್ (15) ವಿಕೆಟ್ಗಳನ್ನು ಕಳೆದುಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟವನ್ನು ಮುಂದುವರಿಸಿದ್ದಾರೆ.
ಈ ನಡುವೆ ಸಂಜು ಅವರ ಎರಡು ಕ್ಯಾಚ್ಗಳನ್ನು ರಾಜಸ್ಥಾನ ಫೀಲ್ಡರ್ಗಳು ಕೈಚೆಲ್ಲಿದರು. ಅಂತಿಮ 60 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 127 ರನ್ಗಳ ಅವಶ್ಯಕತೆಯಿದೆ.
ಮೊಹಮ್ಮದ್ ಶಮಿ ಎಸೆದ ಪ್ರಥಮ ಓವರ್ನಲ್ಲೇ ವಿಕೆಟ್ ಒಪ್ಪಿಸಿದ ಬೆನ್ ಸ್ಟೋಕ್ಸ್ ನಿರಾಸೆ ಮೂಡಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಪಂಜಾಬ್ ಕಿಂಗ್ಸ್, ನಾಯಕ ಕೆಎಲ್ ರಾಹುಲ್ (91), ದೀಪಕ್ ಹೂಡಾ (64) ಮತ್ತು ಕ್ರಿಸ್ ಗೇಲ್ (40) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 221 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
17.4 ಓವರ್ಗಳಲ್ಲೇ ಪಂಜಾಬ್ ಮೊತ್ತವು 200ರ ಗಡಿ ದಾಟಿತ್ತು. ಈ ಮೂಲಕ ಐಪಿಎಲ್ 2021ನೇ ಸಾಲಿನಲ್ಲಿ ಇನ್ನಿಂಗ್ಸ್ವೊಂದರಲ್ಲಿ 200 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಪೇರಿಸಿದ ಮೊದಲ ತಂಡವೆಂಬ ಖ್ಯಾತಿಗೆ ಪಾತ್ರವಾಗಿದೆ.
ಶ್ರೇಯಸ್ ಗೋಪಾಲ್ ಎಸೆದ ಇನ್ನಿಂಗ್ಸ್ನ 14ನೇ ಓವರ್ನಲ್ಲೂ ದೀಪಕ್ ಹೂಡಾ ಮತ್ತಷ್ಟು ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಇದರೊಂದಿಗೆ ಪಂಜಾಬ್ ಮೊತ್ತ 150ರ ಗಡಿ ದಾಟಿತ್ತು.
ಶಿವಂ ದುಬೆ ಎಸೆದ ಇನ್ನಿಂಗ್ಸ್ನ 13ನೇ ಓವರ್ನಲ್ಲಿ ಮೂರು ಸಿಕ್ಸರ್ ಸೇರಿದಂತೆ 20 ರನ್ಗಳು ಹರಿದು ಬಂದಿದ್ದವು.
ನಾಯಕನ ಇನ್ನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ ಕೇವಲ 30 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಇದರೊಂದಿಗೆ ಪಂಜಾಬ್ ಬೃಹತ್ ಮೊತ್ತದತ್ತ ದಾಪುಗಾಲನ್ನಿಟ್ಟಿದೆ.
ಆರಂಭವಾದಲ್ಲಿ ನಿಧಾನವಾಗಿ ಆಡಿದ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಬಳಿಕ ಬಿರುಸಿನ ಆಟವನ್ನು ಪ್ರದರ್ಶಿಸಿದರು. ಅಲ್ಲದೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಕೈಚೆಲ್ಲಿದ ಕ್ಯಾಚ್ಗಳು ರಾಜಸ್ಥಾನಕ್ಕೆ ಮುಳುವಾಗಿ ಪರಿಣಮಿಸಿತ್ತು. ಕೊನೆಗೂ ಗೇಲ್ ಔಟ್ ಮಾಡುವಲ್ಲಿ ರಿಯಾನ್ ಪರಾಗ್ ಯಶಸ್ವಿಯಾದರು.
ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಕ್ರೀಸಿನಲ್ಲಿದ್ದು, ಪಂಜಾಬ್ ತಂಡವು ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ.
ಚೊಚ್ಚಲ ಐಪಿಎಲ್ ಪಂದ್ಯವನ್ನಾಡುತ್ತಿರುವ ಚೇತನ್ ಸಕಾರಿಯಾ ಪಂಜಾಬ್ಗೆ ಮೊದಲ ಆಘಾತ ನೀಡಿದರು. 14 ರನ್ ಗಳಿಸಿದ ಮಯಂಕ್ ಅಗರವಾಲ್ ಔಟಾದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಪರ ಶಾರೂಕ್ ಖಾನ್, ರಿಲೀ ಮೆರೆದಿತ್ ಮತ್ತು ಜೇ ರಿಚರ್ಡ್ಸನ್ ಚೊಚ್ಚಲ ಕ್ಯಾಪ್ ಧರಿಸಿದ್ದಾರೆ.
ತಂಡಗಳು:
ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್/ನಾಯಕ), ಜಾಸ್ ಬಟ್ಲರ್ (ವಿಕೆಟ್ಕೀಪರ್), ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ಅನುಜ್ ರಾವತ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್, ಶ್ರೇಯಸ್ ಗೋಪಾಲ್, ಮಯಂಕ್ ಮಾರ್ಕಂಡೆ, ಆ್ಯಂಡ್ರ್ಯೂ ಟೈ, ಜೈದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜರ್ ರೆಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರ್ಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್ಕೀಪರ್), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಮನದೀಪ್ ಸಿಂಗ್, ಪ್ರಭಸಿಮ್ರನ್ ಸಿಂಗ್, ನಿಕೊಲಾಸ್ ಪೂರನ್ (ವಿಕೆಟ್ಕೀಪರ್), ಸರ್ಫರಾಜ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್, ರವಿ ಬಿಷ್ಣೊಯ, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಇಶಾನ್ ಪೊರೆಲ್, ದರ್ಶನ್ ನಾಲ್ಕಂಡೆ, ಕ್ರಿಸ್ ಜೋರ್ಡಾನ್, ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರೂಕ್ ಖಾನ್, ರಿಲೀ ಮೆರೆದಿತ್, ಮೊಯಿಸೆಸ್ ಹೆನ್ರಿಕ್ಸ್, ಜಲಜ್ ಸಕ್ಸೆನಾ, ಉತ್ಕರ್ಷ್ ಸಿಂಗ್, ಫ್ಯಾಬಿಯನ್ ಅಲನ್, ಸೌರಭ್ ಕುಮಾರ್
ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ, ರಾಹುಲ್ ಮತ್ತು ಕರ್ನಾಟಕದ ಮಯಂಕ್ ಅಗರವಾಲ್ ಪಂಜಾಬ್ ತಂಡದಲ್ಲಿದ್ದಾರೆ. ಒಟ್ಟಿನಲ್ಲಿ ಹೆಸರು ಬದಲಾದ ಬಳಿಕ ಪಂಜಾಬ್ ತಂಡದ ಅದೃಷ್ಟವೂ ಬದಲಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.