ADVERTISEMENT

ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿ: ಪುಟಿದೇಳುವ ವಿಶ್ವಾಸದಲ್ಲಿ ಪಂಜಾಬ್‌

ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿ: ತಂಡಗಳಿಂದ ಅಂತಿಮ ಹಂತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:17 IST
Last Updated 28 ಮಾರ್ಚ್ 2023, 19:17 IST
ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್‌ ಧವನ್‌ ಮೊಹಾಲಿಯಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ
ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್‌ ಧವನ್‌ ಮೊಹಾಲಿಯಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಆರಂಭಕ್ಕೆ ಇನ್ನೆರಡೇ ದಿನಗಳು ಬಾಕಿಯಿದ್ದು, ಎಲ್ಲ ತಂಡಗಳು ಅಂತಿಮ ಹಂತದ ಸಿದ್ಧತೆಯನ್ನು ಚುರುಕುಗೊಳಿಸಿವೆ.

ಕಳೆದ ಟೂರ್ನಿಗಳಲ್ಲಿ ನಿರಾಶೆ ಅನುಭವಿಸಿದ್ದ ಪಂಜಾಬ್‌ ಕಿಂಗ್ಸ್‌ ತಂಡ ಹೊಸ ಆಟಗಾರರನ್ನು ಸೇರಿಸಿಕೊಂಡು ಈ ಬಾರಿ ಆಡುತ್ತಿದ್ದು, ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ. ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ತಂಡವು ಆರು ಹಾಗೂ ಅದಕ್ಕಿಂತ ಕೆಳಗಿನ ಸ್ಥಾನ ಪಡೆದಿತ್ತು. 2014 ರಲ್ಲಿ ಫೈನಲ್‌ ಪ್ರವೇಶಿಸಿದ್ದೇ ಈ ತಂಡದ ಅತ್ಯುತ್ತಮ ಸಾಧನೆ.

ಪಂಜಾಬ್‌ ತಂಡವನ್ನು ಶಿಖರ್‌ ಧವನ್‌ ಮುನ್ನಡೆಸುತ್ತಿದ್ದು, ಆರ್ಷದೀಪ್‌ ಸಿಂಗ್‌, ಕಗಿಸೊ ರಬಾಡ, ಸ್ಯಾಮ್‌ ಕರನ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರಂತಹ ಪ್ರಮುಖ ಆಟಗಾರರನ್ನು ಒಳಗೊಂಡಿದೆ.

ADVERTISEMENT

ಪಂಜಾಬ್‌ ಫ್ರಾಂಚೈಸ್‌, ಟ್ರೆವರ್‌ ಬೇಲಿಸ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದೆ. ಬೇಲಿಸ್‌ ಅವರ ಮಾರ್ಗದರ್ಶನದಲ್ಲಿ ಆಡಿದ್ದ ಕೋಲ್ಕತ್ತ ನೈಟ್‌ ರೈಡರ್ಸ್ ಈ ಹಿಂದೆ ಎರಡು ಸಲ ಚಾಂಪಿಯನ್‌ ಆಗಿತ್ತು.

‘ಡೆತ್ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಮತ್ತು ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಕಾಯ್ದುಕೊಳ್ಳುವ ವಿಚಾರದಲ್ಲಿ ತಂಡದಲ್ಲಿ ಸುಧಾರಣೆ ಕಾಣಬೇಕಿದೆ’ ಎಂದು ಬೇಲಿಸ್‌ ಹೇಳಿದ್ದಾರೆ.

‘ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡುವಲ್ಲಿ ವಿಫಲವಾದ್ದರಿಂದ ತಂಡವು ಕಳೆದ ಸಲ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಅಂತಹ ತಪ್ಪು ಪುನರಾವರ್ತನೆಯಾಗಬಾರದು ಎಂಬ ಕಾರಣ ಯುವ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ’ ಎಂದಿದ್ದಾರೆ.

ಎಸ್‌ಆರ್‌ಎಚ್‌ಗೆ ಮರ್ಕರಂ ಬಲ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದವರು ನಾಯಕ ಏಡನ್‌ ಮರ್ಕರಮ್‌ ಅವರ ಮೇಲೆ ಭರವಸೆ ಇಟ್ಟುಕೊಂಡು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿದೆ.

ಹೈದರಾಬಾದ್‌ ತಂಡ ಮೂರು ವರ್ಷಗಳಲ್ಲಿ ಮೂವರು ನಾಯಕರನ್ನು ಕಂಡಿದೆ. ಈ ಬಾರಿಯ ಟೂರ್ನಿಯು ದಕ್ಷಿಣ ಆಫ್ರಿಕಾದ ಮರ್ಕರಂ ಅವರಿಗೆ ತಮ್ಮ ನಾಯಕತ್ವದ ಕೌಶಲವನ್ನು ತೋರಿಸುವ ಅವಕಾಶ ಕಲ್ಪಿಸಿದೆ. ಚೊಚ್ಚಲ ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯಲ್ಲಿ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವನ್ನು ಅವರು ಪ್ರಶಸ್ತಿಯತ್ತ ಮುನ್ನಡೆಸಿದ್ದರು.

2016ರಲ್ಲಿ ಚಾಂಪಿಯನ್‌ ಆಗಿದ್ದ ಎಸ್‌ಆರ್‌ಎಚ್‌ ತಂಡ ಬಳಿಕದ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಿ ಡೇವಿಡ್‌ ವಾರ್ನರ್‌ ಮತ್ತು ಕೇನ್‌ ವಿಲಿಯಮ್ಸನ್‌ ಅವರು ತಂಡವನ್ನು ಮುನ್ನಡೆಸಿ
ದ್ದರು. ಆದರೆ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ಇಬ್ಬರೂ ನಾಯಕತ್ವ ಕಳೆದುಕೊಂಡಿದ್ದರು.

ಅಗ್ರ ಕ್ರಮಾಂಕವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ ಹೈದರಾಬಾದ್‌ ತಂಡವು ಮಯಂಕ್‌ ಅಗರವಾಲ್‌ ಮತ್ತು ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ
ಸೇರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.