ಹುಬ್ಬಳ್ಳಿ: ಮಹತ್ವದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ನಗರದ ಎನ್.ಕೆ. ಠಕ್ಕರ್ ಇಂಗ್ಲಿಷ್ ಶಾಲೆ ತಂಡ ಕೆಎಸ್ಸಿಎ ಧಾರವಾಡ ವಲಯದ 14 ವರ್ಷದ ಒಳಗಿನವರ ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ರಾಜನಗರದಲ್ಲಿರುವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟ್ ಮಾಡಿದ ಧಾರವಾಡದ ಪವನ್ ಇಂಗ್ಲಿಷ್ ಮಾಧ್ಯಮ ಶಾಲೆ 30 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು.
ಆರಂಭಿಕ ಕ್ರಮಾಂಕದ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡರೂ, ಮಧ್ಯಮ ಕ್ರಮಾಂಕದಲ್ಲಿ ಎಸ್. ಪ್ರಜ್ವಲ್ 63 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 61 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಠಕ್ಕರ್ ಶಾಲೆಯ ಡಿ. ಭರತ್, ಕೆ. ಹಾರ್ದಿಕ್ ತಲಾ ಎರಡು ವಿಕೆಟ್ ಪಡೆದರೆ, ಎಸ್. ಕುಣಾಲ್ ಒಂದು ವಿಕೆಟ್ ಕಬಳಿಸಿದರು.
ಈ ಸಾಧಾರಣ ಗುರಿ ಠಕ್ಕರ್ ಶಾಲೆಗೆ ಯಾವುದೇ ಹಂತದಲ್ಲಿ ಸವಾಲು ಎನಿಸಲಿಲ್ಲ. 20.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಂಡ ಗುರಿ ತಲುಪಿತು. ಆರಂಭಿಕ ಬ್ಯಾಟ್ಸ್ಮನ್ ಶತಕ್ ಗುಂಜಾಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 60 ಎಸೆತಗಳನ್ನು ಎದುರಿಸಿ 12 ಬೌಂಡರಿ ಸೇರಿದಂತೆ ಅಜೇಯ 82 ರನ್ ಗಳಿಸಿದರು. ಟಿ. ಕೇಶವ್ (28 ರನ್) ಜೊತೆಯಾದರು.
ಶತಕ್ ರನ್ ಹೊಳೆ: ಉತ್ತಮ ಬ್ಯಾಟಿಂಗ್ ಮಾಡಿದ ಠಕ್ಕರ್ ಶಾಲೆಯ ಶತಕ್ ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಮೂರು ಶತಕ ಮತ್ತು ಎರಡು ಅರ್ಧಶತಕ ಹೊಡೆದಿದ್ದಾರೆ. ಎಂಟು ಪಂದ್ಯಗಳಿಂದ 554 ರನ್ ಗಳಿಸಿದ್ದಾರೆ. ನಾಲ್ಕು ಬಾರಿ ಅಜೇಯರಾಗಿ ಉಳಿದಿದ್ದಾರೆ. ಕುಣಾಲ್ ಶಾನಭಾಗ್ ಒಟ್ಟು 17 ವಿಕೆಟ್ಗಳನ್ನು ಕಬಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.