ಮುಂಬೈ:ಮುಂದಿನ ತಿಂಗಳು ಆರಂಭವಾಗಲಿರುವ ಇಂಡಿ ಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಗುಲಾಬಿ ವರ್ಣದ ಪೋಷಾಕಿನಲ್ಲಿ ಕಣಕ್ಕಿಳಿಯಲ್ಲಿದ್ದಾರೆ.
ರಾಜಸ್ಥಾನದ ರಾಜಧಾನಿ ಜೈಪುರವು ‘ಪಿಂಕ್ ಸಿಟಿ’ ಎಂದೇ ಖ್ಯಾತವಾಗಿದೆ. ಅದಕ್ಕಾಗಿ ತಂಡದ ಆಟಗಾರರಿಗೆ ಅದೇ ವರ್ಣದ ದಿರಿಸು ನೀಡಲಾಗಿದೆ.
ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಆಟಗಾರರು ಹೊಸ ಪೋಷಾಕಿನಲ್ಲಿ ಮಿಂಚಿದರು.
‘ರಾಜಸ್ಥಾನದ ಜೈಪುರ ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿದೆ. ಉದಯಪುರದಲ್ಲಿ ಗುಲಾಬಿ ಬರ್ಣದ ಗ್ರಾನೈಟ್ ಕಲ್ಲುಗಳನ್ನು ಉತ್ಪಾದಿಸಲಾಗುತ್ತದೆ. ಇದು ಕೂಡ ವಿಶ್ವವಿಖ್ಯಾತಿ ಗಳಿಸಿವೆ. ಆದ್ದರಿಂದ ರಾಜ್ಯದ ಹಿರಿಮೆಯನ್ನು ಸಾರುವ ವರ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಫ್ರಾಂಚೈಸ್ನ ಮಾಲೀಕರಾದ ಮನೋಜ್ ಬದಾಳೆ ಹೇಳಿದ್ದಾರೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷ ನಿಷೇಧ ಶಿಕ್ಷೆಯನ್ನು ತಂಡವು ಅನುಭವಿಸಿತ್ತು. ಅದರ ನಂತರ ಹೋದ ವರ್ಷದ ಆವೃತ್ತಿಯಲ್ಲಿ ಮರುಪ್ರವೇಶ ಮಾಡಿತ್ತು. ಆದರೆ ಆ ಟೂರ್ನಿಯಲ್ಲಿ ಪಿಂಕ್ ಪೋಷಾಕು ಇರಲಿಲ್ಲ.
ಶೇನ್ ವಾರ್ನ್ ಪ್ರಚಾರ ರಾಯಭಾರಿ: ಆಸ್ಟ್ರೇಲಿಯಾದ ಹಿರಿಯ ಆಟಗಾರ ಶೇನ್ ವಾರ್ನ್ ಅವರನ್ನು ರಾಜಸ್ಥಾನ ರಾಯಲ್ಸ್ಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. 2008ರಲ್ಲಿ ತಂಡವು ಐಪಿಎಲ್ ಟ್ರೋಫಿ ಗೆದ್ದಾಗ ವಾರ್ನ್ ನಾಯಕತ್ವ ವಹಿಸಿದ್ದರು. ಹೋದ ವರ್ಷದ ಆವೃತ್ತಿಯಲ್ಲಿ ಅವರು ತಂಡದ ಮಹಾಪೋಷಕರಾಗಿದ್ದರು.
‘ರಾಯಲ್ಸ್ ಬಳಗದೊಂದಿಗೆ ನನ್ನ ನಂಟು ಮುಂದುವರಿಸಿದರುವುದು ಸಂತಸ ತಂದಿದೆ. ತಂಡದ ಅಭಿಮಾನಿಗಳ ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿರುವೆ. ಈ ಬಾರಿ ಹೊಸ ರೂಪದೊಂದಿಗೆ ತಂಡವು ಕಣಕ್ಕಿಳಿಯುತ್ತಿರುವುದರಿಂದ ಪುಳಕಗೊಂಡಿದ್ದೇನೆ’ ಎಂದು ಶೇನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.