ದುಬೈ: ವಿಶ್ವಕಪ್ ಟೂರ್ನಿಗಾಗಿ ತಂಡದ ಆಯ್ಕೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಕೋಚ್ ರವಿಶಾಸ್ತ್ರಿ ಮೌನ ಮುರಿದಿದ್ದಾರೆ. ‘ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅವಕಾಶವಿದ್ದರೆ 16 ಆಟಗಾರರ ತಂಡ ಕಟ್ಟಲು ನಾನು ಆದ್ಯತೆ ನೀಡುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.
ಆಯ್ಕೆ ಸಮಿತಿಯು ಸೋಮವಾರ 15 ಮಂದಿಯನ್ನು ಆರಿಸಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಟಿ ರಾಯುಡು ಬದಲಿಗೆ ಆಲ್ರೌಂಡರ್ ವಿಜಯಶಂಕರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ಪರಿಗಣಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ರಾಯುಡು, ಪಂತ್ ಮತ್ತು ನವದೀಪ್ ಸೈನಿ ಅವರನ್ನು ಕಾಯ್ದಿರಿಸಿದ ಆಟಗಾರರಾಗಿ ಸಮಿತಿ ಬುಧವಾರ ಆರಿಸಿತ್ತು.
‘ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿರಲಿಲ್ಲ. ನನ್ನಿಂದ ಅಭಿಪ್ರಾಯ ಕೇಳಿದ್ದರೆ 16 ಮಂದಿಯನ್ನು ಆರಿಸುವಂತೆ ಹೇಳುತ್ತಿದ್ದೆ’ ಎಂದು ಶಾಸ್ತ್ರಿ ಹೇಳಿರುವುದಾಗಿ ಕ್ರೀಡಾ ವೆಬ್ಸೈಟ್ ಸ್ಪೋರ್ಟ್ಸ್ 360 ಅಭಿಪ್ರಾಯಪಟ್ಟಿದೆ.
‘ತಂಡದಲ್ಲಿ ಸ್ಥಾನ ಸಿಗದವರಿಗೆ ಬೇಸರವಾಗುವುದು ಸಹಜ. ಆದರೆ ಅವರು ಚಿಂತೆ ಮಾಡದೆ ಸಾಮರ್ಥ್ಯ ತೋರುತ್ತಾ ಸಾಗಬೇಕು. ಯಾವುದೇ ಸಂದರ್ಭದಲ್ಲಿ ಅವಕಾಶಗಳು ಮನೆ ಬಾಗಿಲಿಗೆ ಬರುವ ಸಾಧ್ಯತೆ ಇದೆ’ ಎಂದು ಶಾಸ್ತ್ರಿ ಹೇಳಿರುವುದಾಗಿ ವೆಬ್ಸೈಟ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.