ADVERTISEMENT

‘ಆಟಗಾರರಿಗೆ ಆರ್ಥಿಕ ಭದ್ರತೆ ಒದಗಿಸಲು ದೇಶಿ ಕ್ರಿಕೆಟ್‌ನಲ್ಲೂ ಗುತ್ತಿಗೆ ಪದ್ಧತಿ’

ಪಿಟಿಐ
Published 29 ಅಕ್ಟೋಬರ್ 2019, 5:42 IST
Last Updated 29 ಅಕ್ಟೋಬರ್ 2019, 5:42 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೇಶಿ ಕ್ರಿಕೆಟ್‌ಗೂ ಗುತ್ತಿಗೆ ಪದ್ಧತಿ ಜಾರಿಗೆ ತರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

‘ನಾವು ಪದಾಧಿಕಾರಿಗಳು ಸೇರಿಕೊಂಡು ನೂತನ ಹಣಕಾಸು ಸಮಿತಿಯೊಂದಿಗೆ ಮಾತನಾಡುತ್ತೇವೆ. ದೇಶಿ ಟೂರ್ನಿಗಳಲ್ಲಿ ಆಡುವ (ಪ್ರಥಮದರ್ಜೆ) ಆಟಗಾರರಿಗೆ ಗುತ್ತಿಗೆ ಪದ್ಧತಿಯಡಿಯಲ್ಲಿ ತರುವ ಬಗ್ಗೆ ಮತ್ತು ಸಂಭಾವನೆ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ADVERTISEMENT

‘ನಾವು ಅಧಿಕಾರಕ್ಕೆ ಬಂದು ಐದಾರು ದಿನಗಳು ಕಳೆದಿವೆ ಅಷ್ಟೇ. ಅದರ ನಡುವೆ ದೀಪಾವಳಿ ಹಬ್ಬದ ರಜೆಗಳೂ ಬಂದಿವೆ. ಸದ್ಯದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕನ ಮಾಡಲು ಎರಡು ವಾರಗಳಾದರೂ ಬೇಕು. ಮಾಡಲು ಬಹಳಷ್ಟು ಕೆಲಸಗಳು ಇವೆ. ಕ್ರಿಕೆಟ್‌ನ ಸುಧಾರಣೆಗೆ ಬಹಳಷ್ಟು ಯೋಜನೆಗಳನ್ನು ತರುವ ಯೋಚನೆಗಳೂ ಇವೆ’ ಎಂದರು.

ಪ್ರಸ್ತುತ ದೇಶಿ ಆಟಗಾರರು ಪ್ರತಿವರ್ಷ 25–30 ಲಕ್ಷ ಆದಾಯ ಪಡೆಯುತ್ತಾರೆ. ಅದೂ ಅವರು ಆಡುವ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ. ಕೆಲವರು ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಪಡೆಯಬಹುದು. ಪ್ರಥಮ ದರ್ಜೆ ಪಂದ್ಯದಲ್ಲಿ ದಿನವೊಂದಕ್ಕೆ ₹ 35 ಸಾವಿರ ಸಂಭಾವನೆ ಪಡೆಯುತ್ತಾರೆ. ಅಲ್ಲದೇ ದಿನಭತ್ಯೆಯನ್ನು ಪ್ರತ್ಯೇಕವಾಗಿ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.