ADVERTISEMENT

ಚೆನ್ನೈಗೆ ಒಲಿದ ‘ನಾಟಕೀಯ’ ಜಯ

ಧೋನಿ–ಅಂಬಟಿ ರಾಯುಡು ಅರ್ಧಶತಕ: ಅಂತಿಮ ಎಸೆತದಲ್ಲಿ ಸ್ಯಾಂಟನರ್‌ ಗೆಲುವಿನ ಸಿಕ್ಸರ್‌

ಪಿಟಿಐ
Published 11 ಏಪ್ರಿಲ್ 2019, 20:08 IST
Last Updated 11 ಏಪ್ರಿಲ್ 2019, 20:08 IST
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂಗಳದ ಅಂಪೈರ್‌ಗಳ ಜೊತೆ ವಾಗ್ವಾದ ನಡೆಸಿದ ಸಂದರ್ಭ –ಎಎಫ್‌ಪಿ ಚಿತ್ರ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂಗಳದ ಅಂಪೈರ್‌ಗಳ ಜೊತೆ ವಾಗ್ವಾದ ನಡೆಸಿದ ಸಂದರ್ಭ –ಎಎಫ್‌ಪಿ ಚಿತ್ರ   

ಜೈಪುರ: ವೈಡ್ ಬಾಲ್, ಒಂದು ಸಿಕ್ಸರ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವು...

ಗುರುವಾರ ರಾತ್ರಿ ಇಲ್ಲಿಯ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಎದುರು ನಡೆದ ಪಂದ್ಯದ ಕೊನೆಯ ಎಸೆತದಲ್ಲಿ ನಡೆದದ್ದು ಇಷ್ಟು. ಚೆನ್ನೈ ತಂಡಕ್ಕೆ ಗೆಲ್ಲಲು ಒಂದು ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿದ್ದಾಗ ನಡೆದ ನಾಟಕೀಯ ತಿರುವು ಇದು.

ಬೆನ್ ಸ್ಟೋಕ್ಸ್‌ ಹಾಕಿದ ಎಸೆತವು ವೈಡ್ ಆಯಿತು. ನಂತರ ಲಭಿಸಿದ ಅವಕಾಶದಲ್ಲಿ ಮಿಷೆಲ್ ಸ್ಯಾಂಟನರ್‌ ಸಿಕ್ಸರ್ ಎತ್ತಿದರು. ಚೆನ್ನೈ ತಂಡವು 4 ವಿಕೆಟ್‌ಗಳಿಂದ ಗೆದ್ದಿತು.

ADVERTISEMENT

ಆದರೆ ಇದಕ್ಕೂ ಮುನ್ನ ಪಂದ್ಯದ ಕೊನೆಯ ಓವರ್‌ನಲ್ಲಿ ಹಲವು ನಾಟಕೀಯ ತಿರುವುಗಳು ನಡೆದವು.

ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 151 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಆರಂಭದಲ್ಲಿಯೇ ಎಡವಿತ್ತು. 5.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 24 ರನ್‌ ಗಳಿಸಿ ಸಂಕಷ್ಟದಲ್ಲಿತ್ತು.

ಈ ಹಂತದಲ್ಲಿ ಜೊತೆಗೂಡಿದ ಅಂಬಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಇಬ್ಬರೂ ಅರ್ಧಶತಕಗಳನ್ನು ಗಳಿಸಿದರು. ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಆದರೆ 18ನೇ ಓವರ್‌ನಲ್ಲಿ ಅಂಬಟಿ ರಾಯುಡು ಅವರು ಔಟಾಗುವುದರೊಂದಿಗೆ ತಂಡದ ಗೆಲುವಿನ ಅವಕಾಶ ಅತ್ತಿಂದಿತ್ತ ಓಲಾಡತೊಡಗಿತು. ಆದರೂ ಧೋನಿ ತಮ್ಮ ಪ್ರಯತ್ನ ಮುಂದುವರಿಸಿದರು.

ಗೆಲುವಿಗೆ ಕೊನೆಯ ಓವರ್‌ನಲ್ಲಿ 18 ರನ್‌ಗಳು ಬೇಕಿದ್ದವು. ಬೆನ್ ಸ್ಟೋಕ್ಸ್‌ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನೇ ರವೀಂದ್ರ ಜಡೇಜ ಸಿಕ್ಸರ್‌ಗೆ ಎತ್ತಿದರು. ಎರಡನೇ ಎಸೆತ ನೋಬಾಲ್ ಆಯಿತು ಮತ್ತು ಜಡೇಜ ಒಂದು ರನ್ ಕೂಡ ಗಳಿಸಿದರು. ಇದರಿಂದಾಗೆ ಧೋನಿಗೆ ಫ್ರೀಹಿಟ್‌ ಆಡುವ ಅವಕಾಶ ಸಿಕ್ಕಿತು. ಅವರು ಅದರಲ್ಲಿ ಎರಡು ರನ್ ಗಳಿಸಿದರು. ಆದರೆ ಮೂರನೇ ಎಸೆತವು ಯಾರ್ಕರ್‌ ರೂಪದಲ್ಲಿ ಬಂದು ಧೋನಿಯ ಸ್ಟಂಪ್‌ಗೆ ಅಪ್ಪಳಿಸಿತು. ಪ್ರೇಕ್ಷಕರು ಸ್ಥಂಭೀಭೂತರಾದರು. ಕೊನೆಯ ಮೂರು ಎಸೆತಗಳಲ್ಲಿ ಎಂಟು ರನ್‌ಗಳು ಬೇಕಾಗಿದ್ದವು.

ನಾಲ್ಕನೇ ಎಸೆತದಲ್ಲಿ ಸ್ಟೋಕ್ಸ್‌ ಹಾಕಿದ ಫುಲ್ ಟಾಸ್ ಎಸೆತವು ಬ್ಯಾಟ್‌ಗೆ ತಗುಲದೇ ಹಿಂದೆ ಸಾಗಿ ಹೋಯಿತು. ಫೀಲ್ಡರ್‌ ಇರದ ಕಾರಣ ಬ್ಯಾಟ್ಸ್‌ಮನ್ ಸ್ಯಾಂಟನರ್ – ಜಡೇಜ ಸೇರಿ ಎರಡು ರನ್ ಗಳಿಸುವಲ್ಲಿ ಸಫಲರಾದರು.

ಆದರೆ, ಅಂಪೈರ್ ಉಲ್ಲಾಸ್‌ ಗಂದೆ ನೋಬಾಲ್ ಸೂಚನೆ ಕೊಟ್ಟರು. ಆದರೆ ಸ್ಕ್ವೇರ್‌ ಲೆಗ್‌ ಅಂಪೈರ್ ಆ್ಯಕ್ಸನ್‌ಫೋರ್ಡ್‌ ನೋಬಾಲ್ ನೀಡಲು ಒಪ್ಪಲಿಲ್ಲ. ಇದರಿಂದಾಗಿ ನಾನ್‌ಸ್ಟೈಕರ್‌ ನಲ್ಲಿದ್ದ ಜಡೇಜ ಅವರು ನೋಬಾಲ್ ನೀಡುವಂತೆ ಅಂಪೈರ್‌ಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಡೇಜ ಮತ್ತು ಅಂಪೈರ್ ನಡುವೆ ಮಾತುಕತೆ ಬಿಸಿ ಯೇರಿತು. ಡಗ್‌ಔಟ್‌ನಲ್ಲಿದ್ದ ನಾಯಕ ಧೋನಿ ಕೂಡ ಮೈದಾನಕ್ಕೆ ಬಂದು ಅಂಪೈರ್ ಜೊತೆಗೆ ಮಾತನಾಡಿದರು. ಆದರೆ ನೋಬಾಲ್ ಕೊಡಲು ಅಂಪೈರ್‌ ಒಪ್ಪಲಿಲ್ಲ.

ಐದನೇ ಎಸೆತದಲ್ಲಿ ಮತ್ತೆ ಎರಡು ರನ್‌ ಗಳಿಸಿದ ಸ್ಯಾಂಟನರ್ ಕೊನೆಯ ಎಸೆತ ಎದುರಿಸಲು ಸಿದ್ಧರಾದರು. ಆ ಎಸೆತವು ವೈಡ್ ಆಯಿತು. ನಂತರ ಸ್ಯಾಂಟನರ್‌ ದಿಟ್ಟತನಕ್ಕೆ ಜಯ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.