ದಾವಣಗೆರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತುಮಕೂರು ವಲಯದ ಕ್ರಿಕೆಟ್ ಟೂರ್ನಿಯ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಫೆ.23ರಂದು ಬೆಳಿಗ್ಗೆ 11ಕ್ಕೆ ಬಾಪೂಜಿ ಎಂ.ಬಿ.ಎ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು, ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಪಾಲ್ಗೊಳ್ಳುವರು ಎಂದು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ನಗರದಲ್ಲಿ ಸುಮಾರು 500 ಕ್ರಿಕೆಟ್ ಕ್ರೀಡಾಪಟುಗಳಿದ್ದು, 9 ಕ್ರಿಕೆಟ್ ಕ್ಲಬ್ಗಳಿವೆ. ರಕ್ಷಿತ ನಾಯಕ, ಮಾಧವಿ ಬೆಹೆಲ್, ಪೂಜಾ ಡಿ.ಎ, ನಿರ್ಮಿತ್ ಶಶಿಧರ್, ರಿಯಾನ್ ಮಲ್ಲಿಕ್ ಸೇರಿ ಪ್ರತಿವರ್ಷ 20ಕ್ಕೂ ಹೆಚ್ಚು ಆಟಗಾರರು ತುಮಕೂರು ವಲಯವನ್ನು ಪ್ರತಿನಿಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ವಿಂಗ್ ಅಭಿವೃದ್ಧಿಯಾದರೆ, ಪ್ರತಿಭಾವಂತ ಆಟಗಾರರಿಗೆ ಸಹಾಯವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಎಸ್. ಸಂತೋಷ್ ಮೆನನ್, ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ, ಬಾಪೂಜಿ ಬಿ ಸ್ಕೂಲ್ ಅಧ್ಯಕ್ಷ ಅಥಣಿ ಎಸ್. ವೀರಣ್ಣ, ತುಮಕೂರು ವಲಯದ ಅಧ್ಯಕ್ಷ ಡಿ.ಎಚ್.ಮೋಹನ್ ರಾವ್, ನಿರ್ವಾಹಕ ಕೆ. ಶಶಿಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುನೈಟೆಡ್ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಸಿ.ಎಂ. ಪ್ರಕಾಶ್, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ತರಬೇತುದಾರ ತಿಮ್ಮೇಶ್, ಕ್ರೀಡಾಪಟುಗಳಾದ ಕರಿಬಸಪ್ಪ, ಯುವರಾಜ್ ಹಾಗೂ ಮೇಘರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.