ಮುಂಬೈ: ‘ಈ ಸಲದ ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ತಂಡಗಳ ಪೈಕಿ ಭಾರತವೇ ಬಲಿಷ್ಠವಾಗಿದೆ. ನಮ್ಮ ತಂಡದಲ್ಲಿ ವಿಶ್ವಶ್ರೇಷ್ಠ ಬೌಲರ್ಗಳಿದ್ದಾರೆ. ಪ್ರತಿಭಾನ್ವಿತ ಆಲ್ರೌಂಡರ್ಗಳೂ ಇದ್ದಾರೆ’ ಎಂದು ಭಾರತ ತಂಡದ ಹಿರಿಯ ಆಟಗಾರ ಲಾಲಚಂದ್ ರಜಪೂತ್ ಹೇಳಿದ್ದಾರೆ.
‘ಭಾರತ ತಂಡವು ಸಮತೋಲನದಿಂದ ಕೂಡಿದೆ. ವಿರಾಟ್ ಪಡೆಯನ್ನು ಕಟ್ಟಿಹಾಕುವುದು ಅಷ್ಟು ಸುಲಭವಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ‘ಟ್ರಂಪ್ ಕಾರ್ಡ್’ ಆಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರವೀಂದ್ರ ಜಡೇಜ ಕೂಡಾ ಭರವಸೆಯ ತಾರೆಯಾಗಿದ್ದಾರೆ. ಈ ಸಲ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲಿ ಕೊಹ್ಲಿ ಪಡೆ ಮುಂಚೂಣಿಯಲ್ಲಿದೆ’ ಎಂದು ಜಿಂಬಾಬ್ವೆ ತಂಡದ ಕೋಚ್ ಆಗಿರುವ ರಜಪೂತ್ ಅಭಿಪ್ರಾಯಪಟ್ಟಿದ್ದಾರೆ.
‘ನಾವು 2007ರ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಾಗ ತಂಡದಲ್ಲಿ ಸಾಕಷ್ಟು ಮಂದಿ ಆಲ್ರೌಂಡರ್ಗಳು ಇದ್ದರು. ಈ ಸಲದ ವಿಶ್ವಕಪ್ಗೆ ಪ್ರಕಟಿಸಲಾಗಿರುವ ತಂಡದಲ್ಲೂ ಆಲ್ರೌಂಡರ್ಗಳು ಹೆಚ್ಚಿದ್ದಾರೆ. ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಆಲ್ರೌಂಡರ್ಗಳಿಗೆ ಇರುತ್ತದೆ’ ಎಂದಿದ್ದಾರೆ.
‘ಈ ಹಿಂದೆ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅಗ್ರ ಕ್ರಮಾಂಕದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದರು. ಅವರ ಸ್ಥಾನವನ್ನು ಈಗ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ತುಂಬುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ವಿಶ್ವ ಶ್ರೇಷ್ಠ ‘ಫಿನಿಷರ್’ ಆಗಿದ್ದಾರೆ. 37ರ ಹರೆಯದಲ್ಲೂ ಅವರು ಚುರುಕಾಗಿ ವಿಕೆಟ್ ಕೀಪಿಂಗ್ ಮಾಡುತ್ತಿರುವುದು ಪ್ರಶಂಸನೀಯ’ ಎಂದು ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.