ಬೆಂಗಳೂರು: ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ ಕಂಟ್ರೋಲರೇಟ್ ಆಫ್ ಇನ್ಸ್ಪೆಕ್ಷನ್ ಇಲೆಕ್ಟ್ರಾನಿಕ್ಸ್ (ಸಿಐಎಲ್) ತಂಡದ ಮೂವರು ಆಟಗಾರರನ್ನು ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಮಾನತುಗೊಳಿಸಿದೆ. ವೆಂಕಟೇಶ್, ಚಾಂದ್ ಪಾಶ ಮತ್ತು ಪ್ರದೀಪ್ ಅವರು ಮೂರು ಪಂದ್ಯಗಳಲ್ಲಿ ಆಡುವಂತಿಲ್ಲ ಎಂದು ಸಂಸ್ಥೆ ಸೂಚಿಸಿದೆ.
ಡಿಸೆಂಬರ್ ಐದರಂದು ನಡೆದಿದ್ದ ಬಿಡಿಎಫ್ಎ ಸೂಪರ್ ಡಿವಿಷನ್ ಟೂರ್ನಿಯ ಜವಾಹರ್ ಯೂನಿಯನ್ ಎದುರಿನ ಪಂದ್ಯದಲ್ಲಿ ಅಹಿತಕರ ಘಟನೆ ನಡೆದಿತ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಡಿಎಫ್ಎ ಸೋಮವಾರ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಫಿಜಿಯೊಗಳು ಅಲಭ್ಯ: ಸೋಮವಾರ ನಡೆಯಬೇಕಾಗಿದ್ದ ’ಎ’ ಡಿವಿಷನ್ನ ಬಿಯುಎಫ್ಸಿ ಮತ್ತು ಎಜಿಒಆರ್ಸಿ ನಡುವಿನ ಪಂದ್ಯವನ್ನು ಫಿಜಿಯೊಗಳು ಅಲಭ್ಯವಾಗಿರುವ ಕಾರಣ ರದ್ದುಗೊಳಿಸಲಾಯಿತು. ಫಿಜಿಯೊಗಳು ಬಂದ ನಂತರ ಸೂಪರ್ ಡಿವಿಷನ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ತಂಡ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್ಸಿಯನ್ನು 2–1ರಿಂದ ಮಣಿಸಿತು. ವಿಜಯಿ ತಂಡದ ಪರ ಚೀಡೆ (17ನೇ ನಿಮಿಷ) ಮತ್ತು ಸುಧೀರ್ (36ನೇ ನಿ) ಗೋಲು ಗಳಿಸಿದರೆ ಬೆಂಗಳೂರು ಡ್ರೀಮ್ಗಾಗಿ ಆದಿತ್ಯ (73ನೇ ನಿ) ಗೋಲು ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.