ಬೆಂಗಳೂರು: ‘ಕ್ರೀಡಾಪಟುಗಳಿಗೆ ಶಿಸ್ತು ಮತ್ತು ಸಂಯಮ ಬಹಳ ಅಗತ್ಯ. ಈ ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ಸಾಧನೆಯ ಶಿಖರ ಏರಬಹುದು’ ಎಂದು ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹೇಳಿದರು.
ಜೈನ್ ಸಮೂಹ ಸಂಸ್ಥೆ (ಜೆಜಿಐ) ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
‘ನಾನೂ ಜೈನ್ ಕಾಲೇಜಿನ ವಿದ್ಯಾರ್ಥಿ. ಬ್ಯಾಡ್ಮಿಂಟನ್ನಲ್ಲಿ ಎತ್ತರದ ಸಾಧನೆ ಮಾಡಿ ಅರ್ಜುನ ಗೌರವಕ್ಕೆ ಭಾಜನನಾಗುತ್ತೇನೆ ಎಂದು ಖಂಡಿತಾ ಊಹಿಸಿರಲಿಲ್ಲ. ಶ್ರದ್ಧೆ ಮತ್ತು ಕಠಿಣ ಪರಿಶ್ರಮ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನೀವೆಲ್ಲರೂ ಪ್ರತಿಭಾವಂತರೆ. ಯಾರೂ ಕೈಕಟ್ಟಿ ಕೂರಬೇಡಿ. ಜೀವನ ಪ್ರೀತಿ ಬೆಳೆಸಿಕೊಳ್ಳಿ. ಸಾಧನೆಯ ಛಲದೊಂದಿಗೆ ಮುಂದಡಿ ಇಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಅಂತರರಾಷ್ಟ್ರೀಯ ಈಜುಪಟು ಶ್ರೀಹರಿ ನಟರಾಜ್ಗೆ ₹1.50 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಈಜುಪಟು ವಿ.ಕೆ.ಆರ್. ಮೀನಾಕ್ಷಿ (₹ 50 ಸಾವಿರ), ಶ್ರುತಿ ಮಹಾಲಿಂಗಂ (₹ 25 ಸಾವಿರ), ದೀಕ್ಷಾ ರಮೇಶ್ (₹ 15 ಸಾವಿರ), ರಕ್ಷಿತ್ ಶೆಟ್ಟಿ (₹ 26 ಸಾವಿರ), ಎಸ್.ಪಿ.ಲಿಖಿತ್ (₹34 ಸಾವಿರ) ಅವರೂ ಬಹುಮಾನ ಪಡೆದರು.
ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಚೆನ್ರಾಜ್ ರಾಯಚಂದ್, ಕ್ರೀಡಾ ಶಿಕ್ಷಣ ನಿರ್ದೇಶಕ ಯು.ವಿ.ಶಂಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.