ನವದೆಹಲಿ: ಕೋವಿಡ್ –19 ಹಾವಳಿಯಿಂದ ಈ ಋತುವಿನ ವೇಳಾಪಟ್ಟಿಯನ್ನು ಬದಲಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಇಂಡಿಯಾ ಓಪನ್ ಸೂಪರ್ 500 ಮತ್ತು ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಟೂರ್ನಿಗಳನ್ನು ರದ್ದುಗೊಳಿಸಲು ಗುರುವಾರ ನಿರ್ಧರಿಸಿದೆ.
ಇಂಡಿಯಾ ಓಪನ್ ಟೂರ್ನಿಯನ್ನು ಮಾರ್ಚ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ನಂತರ ಡಿಸೆಂಬರ್ಗೆ ಮುಂದೂಡಲಗಿತ್ತು. ಆ ತಿಂಗಳ ಎಂಟರಿಂದ 13ರ ವರೆಗೆ ನವದೆಹಲಿಯಲ್ಲಿ ನಡೆಯಬೇಕಿತ್ತು. ಸೈಯದ್ ಮೋದಿ ಟೂರ್ನಿ ನವೆಂಬರ್ 17ರಿಂದ 22ರ ವರೆಗೆ ಲಖನೌದಲ್ಲಿ ಆಯೋಜನೆಯಾಗಬೇಕಾಗಿತ್ತು. ಎಚ್ಎಸ್ಬಿಸಿ ಬಿಡಬ್ಲ್ಯುಎಫ್ ವಿಶ್ವ ಟೂರ್ಗಾಗಿ ವೇಳಾಪಟ್ಟಿಯನ್ನು ಮರುನಿಗದಿ ಮಾಡಲಾಗಿದೆ. ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ ಅಕ್ಟೋಬರ್ ಮೂರರಿಂದ 11ರ ವರೆಗೆ ಡೆನ್ಮಾರ್ಕ್ನ ಆರ್ಹಸ್ನಲ್ಲಿ ನಡೆಯಲಿದೆ.
‘ಆಟಗಾರರು ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರ ಸುರಕ್ಷತೆಯ ದೃಷ್ಟಿಯಿಂದ ಟೂರ್ನಿಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. 2021ರಲ್ಲಿ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗುವ ಭರವಸೆ ಇದೆ’ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಟ್ವೀಟ್ ಮಾಡಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ನಂತರ ವೈರಾಣು ಹಾವಳಿಯಿಂದಾಗಿ ಬ್ಯಾಡ್ಮಿಂಟನ್ ಟೂರ್ನಿಗಳು ನಡೆಯಲಿಲ್ಲ. ಮೇ ತಿಂಗಳಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡಬ್ಲ್ಯುಎಫ್ ಬಿಡುಗಡೆ ಮಾಡಿತ್ತು. ‘ಕೋವಿಡ್ ಹಾವಳಿ ಹೆಚ್ಚುತ್ತಿರುವುದರಿಂದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರವೂ ಟೂರ್ನಿಗಳನ್ನು ಆಯೋಜಿಸಲು ಆಗುತ್ತಿಲ್ಲ’ ಎಂದು ಬಿಡಬ್ಲ್ಯುಎಫ್ ಮಹಾಕಾರ್ಯದರ್ಶಿ ಥಾಮಸ್ ಲುಂಡ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.