ಆರ್ಚರಿ
ಅಂತ್ಯಾಲ (ಟರ್ಕಿ): ಭಾರತದ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು, ಆರ್ಚರಿ ವಿಶ್ವಕಪ್ ಸ್ಟೇಜ್3 ಕೂಟದಲ್ಲಿ ನಿರಾಶೆ ಮೂಡಿಸಿದರು. ಶುಕ್ರವಾರ ವೈಯಕ್ತಿಕ ಮತ್ತು ಮಿಶ್ರ ವಿಭಾಗದಲ್ಲಿ ಒಬ್ಬರಿಗೂ ಪದಕ ಸುತ್ತಿಗೇರಲು ಸಾಧ್ಯವಾಗಲಿಲ್ಲ.
ಶಾಂಘೈನಲ್ಲಿ ನಡೆದ ಈ ಹಿಂದಿನ ವಿಶ್ವಕಪ್ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡು ಭಾರತ ಪದಕಪಟ್ಟಿಯಲ್ಲಿ ದಕ್ಷಿಣ ಕೊರಿಯಾ ನಂತರ ಎರಡನೇ ಸ್ಥಾನ ಪಡೆದಿತ್ತು. ಆದರೆ ಈ ಕೂಟದಲ್ಲಿ ಇದುವರೆಗೆ ಪದಕ ಖಾತೆ ತೆರೆದಿಲ್ಲ.
ಕಳೆದ ವಿಶ್ವಕಪ್ನ ವಿಜೇತೆ ಹಾಗೂ ನಾಲ್ಕನೇ ಶ್ರೇಯಾಂಕದ ಮಧುರಾ ದಾಮಣಗಾಂವಕರ್ ಕ್ವಾರ್ಟರ್ಫೈನಲ್ನಲ್ಲಿ ಐದನೇ ಶ್ರೇಯಾಂಕದ ಮರಿಯಾನಾ ಬರ್ನಾಲ್ (ಮೆಕ್ಸಿಕೊ) ಅವರಿಗೆ 152–159ರಲ್ಲಿ ಮಣಿದರು.
ವಿಶ್ವ ಚಾಂಪಿಯನ್ ಅದಿತಿ ಸ್ವಾಮಿ ಅವರೂ ಎಂಟರ ಘಟ್ಟದಲ್ಲಿ 147–152ರಲ್ಲಿ ಎರಡನೇ ಶ್ರೇಯಾಂಕದ ಆಂಡ್ರಿಯಾ ಬಸೆರಾ (ಮೆಕ್ಸಿಕೊ) ಅವರಿಗೆ ಮಣಿದರು.
ಪುರುಷರ ವಿಭಾಗದಲ್ಲಿ 13ನೇ ಶ್ರೇಯಾಂಕದ ರಿಷಭ್ ಯಾದವ್ ಅವರು 28ನೇ ಶ್ರೇಯಾಂಕದ ನಿಕೋಲಸ್ ಗೆರಾರ್ಡ್ (ಫ್ರಾನ್ಸ್) ಅವರಿಗೆ ಎಂಟರ ಘಟ್ಟದಲ್ಲಿ ಸೋತರು. ಯಾದವ್ ಇದಕ್ಕೆ ಮೊದಲು ಸ್ವದೇಶದ ಅಭಿಷೇಕ್ ವರ್ಮಾ ಅವರನ್ನು ಪ್ರಿಕ್ವಾರ್ಟರ್ಫೈನಲ್ನಲ್ಲಿ ಮಣಿಸಿದ್ದರು.
ಅಚ್ಚರಿ ಎಂಬಂತೆ, ವಿಶ್ವ ಚಾಂಪಿಯನ್ ಓಜಸ್ ದೇವತಳೆ ಅವರು ಮೊದಲ ಸುತ್ತಿನಲ್ಲೇ ಅಮೆರಿಕದ ಜೇಮ್ಸ್ ಲುಟ್ಝ್ ಅವರಿಗೆ 157–161ರಲ್ಲಿ ಮಣಿದರು.
ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಮಧುರಾ ದಾಮಣಗಾಂವಕರ್– ರಿಷಭ್ ಯಾದವ್ ಅವರು 160–162ರಲ್ಲಿ ಎಸ್ಟೋನಿಯಾದ ಎದುರಾಳಿಗಳಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.