ADVERTISEMENT

ಮೂಡುಬಿದಿರೆ: ಅಥ್ಲೆಟಿಕ್ಸ್‌ ರೋಮಾಂಚನ

ಪದಕ ವಿಜೇತರ ಗೌರವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 18:45 IST
Last Updated 3 ಜನವರಿ 2022, 18:45 IST
ಕ್ರೀಡಾಕೂಟಕ್ಕೆ ಸೋಮವಾರ ಅಭ್ಯಾಸ ನಡೆಸಿದ ಕ್ರೀಡಾಪಟುಗಳು
ಕ್ರೀಡಾಕೂಟಕ್ಕೆ ಸೋಮವಾರ ಅಭ್ಯಾಸ ನಡೆಸಿದ ಕ್ರೀಡಾಪಟುಗಳು   

ಮೂಡುಬಿದಿರೆ: ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಯುವ ಕ್ರೀಡಾಪಟುಗಳ ಸಂಚಲನಕ್ಕೆ ಅಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅಂಗಣ ಸಜ್ಜಾಗಿದೆ. ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ಮಂಗಳವಾರ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.

‘ದೇಶದ 400ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ 3,500ಕ್ಕೂ ಹೆಚ್ಚು ಕ್ರೀಡಾಪಟುಗಳು, 1 ಸಾವಿರಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.ಪದಕ ವಿಜೇತರನ್ನು ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ತಿಳಿಸಿದರು.

ಮಂಗಳವಾರ ಸಂಜೆ 5:30ಕ್ಕೆ ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಕ್ರೀಡಾಕೂಟ ಉದ್ಘಾಟಿಸುವರು. ಇದಕ್ಕೂ ಮೊದಲು ಕ್ರೀಡಾಪಟುಗಳಿಂದ ಪಥಸಂಚಲನ, ಕಲಾ ತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಸಚಿವ ಸುನಿಲ್ ಕುಮಾರ್, ಶಾಸಕ ಕೆ.ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಲ್ಜೀತ್ ಸಿಂಗ್ ಸೋಖನ್, ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಭಾಗವಹಿಸುವರು.

ADVERTISEMENT

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸತತ 5 ಬಾರಿ ಅಖಿಲ ಭಾರತ ಅಂತರ ವಿ.ವಿ. ಅಥ್ಲೆಟಿಕ್ಸ್‌ ಆಯೋಜಿಸುತ್ತಿದ್ದು 3 ಬಾರಿ ಚಾಂಪಿಯನ್‌ ಆಗಿದೆ. ಪದಕ ವಿಜೇತರಿಗೆ ಆಳ್ವಾಸ್‌ನಿಂದ ಕ್ರಮವಾಗಿ ₹25, ₹15 ಮತ್ತು ₹10 ಸಾವಿರ ನಗದು ಬಹುಮಾನ ನೀಡಲಾಗುವುದು. ಕೂಟ ದಾಖಲೆ ನಿರ್ಮಿಸಿದವರಿಗೆ ₹25 ಸಾವಿರ, ಸಮಗ್ರ ಪ್ರಶಸ್ತಿ ಪಡೆದ ತಂಡಕ್ಕೆ ₹50 ಸಾವಿರ, ರನ್ನರ್ ಅಪ್ ತಂಡಕ್ಕೆ ₹30 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ ₹20 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮೋಹನ ಆಳ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.