ಬೆಂಗಳೂರು: ಸ್ಕಲ್ವಿ ಯುರೋ ಕಪ್ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿ ಬುಧವಾರದಿಂದ ನಡೆಯಲಿದೆ.
ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ (ಕೆ.ಬಿ.ಬಿ.ಎ), ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಜೆ.ಪಿ.ನಗರದ ಎಸ್.ಎಸ್.ಎಸ್.ಎಸ್.ಎಸ್. ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಸಹಯೋಗದಲ್ಲಿ ಒಟ್ಟು ಐದು ದಿನ ಟೂರ್ನಿ ಆಯೋಜನೆಯಾಗಿದೆ.
ಆರ್.ಬಿ.ಐ ಬಡಾವಣೆಯ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಪುರುಷರ ವಿಭಾಗದ 35 ಮತ್ತು ಮಹಿಳಾ ವಿಭಾಗದ 30 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಟೂರ್ನಿಯಲ್ಲಿ ‘ಹ್ಯಾಟ್ರಿಕ್’ ಪ್ರಶಸ್ತಿ ಗೆದ್ದಿರುವ ಕರ್ನಾಟಕದ ಮಹಿಳಾ ತಂಡದವರು ಈ ಬಾರಿಯೂ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಜಯಲಕ್ಷ್ಮಿ ಸಾರಥ್ಯದ ತಂಡದಲ್ಲಿಲಾವಣ್ಯ, ಮೇಘನಾ, ಪಲ್ಲವಿ, ಲತಾ, ಕವನ, ಚಂದನ, ರೇಖಾ, ಮೇಘನಾ ಮತ್ತು ಲಕ್ಷ್ಮಿ ಅವರಂತಹ ಪ್ರತಿಭಾನ್ವಿತರಿದ್ದಾರೆ.
ವಿಜಯನಗರ ಸ್ಪೋರ್ಟ್ಸ್ ಕ್ಲಬ್ನ ತೇಜಸ್ ನಾಯಕತ್ವದ ಪುರುಷರ ತಂಡವೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಕಿರಣ್ ಕುಮಾರ್, ಗೋಪಾಲ್, ವಾರಿದಿ, ಉಲ್ಲಾಸ್, ಮಹದೇವಸ್ವಾಮಿ, ನಟರಾಜ್, ಮನೀಷ್, ತಿಲಕ್ ಕುಮಾರ್ ಮತ್ತು ಹರೀಶ್ ಅವರು ಮಿಂಚುವ ವಿಶ್ವಾಸದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.