ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಭಾರತದ ರವಿ ದಹಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.
ಚಾಂಪಿಯನ್ಷಿಪ್ಗಾಗಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಮಂಗಳವಾರ ಆಯ್ಕೆ ಟ್ರಯಲ್ಸ್ನಲ್ಲಿ ನಡೆುಸುತ್ತಿದೆ. ಟ್ರಯಲ್ಸ್ಗೆ ಸಿದ್ಧವಾಗಲು ತನಗೆ ಸಮಯ ದೊರೆಯದ ಹಿನ್ನೆಲೆಯಲ್ಲಿ ಚಾಂಪಿಯನ್ಷಿಪ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾಗಿ ರವಿ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್ಷಿಪ್ ಅಕ್ಟೋಬರ್ 2ರಿಂದ 10ರವರೆಗೆ ನಾರ್ವೆಯ ಓಸ್ಲೊದಲ್ಲಿ ನಿಗದಿಯಾಗಿದೆ.
ರವಿ ಮತ್ತು ಟೋಕಿಯೊ ಕೂಟದಲ್ಲಿ ಪದಕ ವಿಜೇತ ಇನ್ನುಳಿದ ಕ್ರೀಡಾಪಟುಗಳು ಹಲವಾರು ಅಭಿನಂದನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
‘ಯಾವುದೇ ತಾಲೀಮು ಇಲ್ಲದೆ ಮ್ಯಾಟ್ಗೆ ತೆರಳಲು ಬಯಸುವುದಿಲ್ಲ. ಸಾಕಷ್ಟು ಅಭ್ಯಾಸವಿಲ್ಲದೆ ಸ್ಪರ್ಧಿಸುವುದರಿಂದ ಏನು ಪ್ರಯೋಜನ. ಹಾಗಾಗಿ ನಾನು ವಿಶ್ವ ಚಾಂಪಿಯನ್ಷಿಪ್ನಿಂದ ಹೊರಗುಳಿಯಬೇಕಾಗಿದೆ. ಏಕೆಂದರೆ ನಾನು ಅಭ್ಯಾಸವಿಲ್ಲದೆ ಟ್ರಯಲ್ಸ್ಗಳಿಗೂ ಹೋಗಲು ಬಯಸುವುದಿಲ್ಲ. ಈ ವರ್ಷಾಂತ್ಯಕ್ಕೂ ಮೊದಲು ಒಂದೆರಡು ಟೂರ್ನಿಗಳಲ್ಲಿ ಭಾಗವಹಿಸಲು ಯತ್ನಿಸುವೆ’ ಎಂದು ರವಿ ತಿಳಿಸಿದ್ದಾರೆ.
ಗಾಯದ ಕಾರಣ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಜರಂಗ್ ಪೂನಿಯಾ ಕೂಡ ಈಗಾಗಲೇ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.