ಮುಂಬೈ: ಭರತ್ ಮತ್ತು ವಿಕಾಶ್ ಖಂಡೋಲಾ ಅವರ ಅಮೋಘ ಆಟದ ಬಲದಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಡೊಮ್, ಎನ್ಎಸ್ಸಿಐ ಎಸ್ವಿಪಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವು 56–24 ರಿಂದ ದಬಾಂಗ್ ಡೆಲ್ಲಿ ವಿರುದ್ಧ ಜಯಿಸಿತು.
ಮಿಂಚಿನ ದಾಳಿ ನಡೆಸಿದ ಬೆಂಗಳೂರು ತಂಡದ ಭರತ್ 15 ಹಾಗೂ ವಿಕಾಶ್ ಖಂಡೋಲಾ 13 ಅಂಕ ಗಳಿಸಿ ಗೆಲುವಿನ ರೂವಾರಿಗಳಾದರು.
ಬುಲ್ಸ್ ಆರಂಭದಿಂದಲೇ ಪಾರಮ್ಯ ಮೆರೆಯಿತು. ಪ್ರಥಮಾರ್ಧದಲ್ಲಿ 31–14 ಅಂಕಗಳ ದೊಡ್ಡ ಮುನ್ನಡೆ ಗಳಿಸಿತು. ದಬಂಗ್ ತಂಡಕ್ಕೆ ಯಾವುದೇ ಹಂತದಲ್ಲಿಯೂ ಮೇಲುಗೈ ಸಾಧಿಸಲು ಬಿಡಲಿಲ್ಲ. ಕೊನೆಯವರೆಗೂ ಬಿಗಿಹಿಡಿತ ಸಾಧಿಸಿದ ತಂಡವು ಗೆಲುವನ್ನು ಒಲಿಸಿಕೊಂಡಿತು. ಡೆಲ್ಲಿ ನಾಯಕ ನವೀನ್ ಕುಮಾರ್ ಮತ್ತು ಆಲ್ರೌಂಡರ್ ವಿಜಯ್ ಮಲಿಕ್ ಅವರು ಕ್ರಮವಾಗಿ ಎಂಟು ಹಾಗೂ 6 ಅಂಕ ಗಳಿಸಿದರು. ಆದರೆ, ತಂಡದ ರಕ್ಷಣಾತಂತ್ರಗಳು ಫಲ ನೀಡಲಿಲ್ಲ. ಬೆಂಗಳೂರು ತಂಡವು ಸೆಮಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.
ಯುಪಿ– ಯೋಧಾಸ್ ತಮಿಳ್ ತಲೈವಾಸ್ ನಡುವಣ ಇನ್ನೊಂದು ಎಲಿ ಮಿನೇಟರ್ ಪಂದ್ಯವು 36–36ರಿಂದ ಟೈ ಆಗಿತ್ತು. ಬಳಿಕ ಉಭಯ ತಂಡಗಳಿಗೆ ತಲಾ 5 ರೈಡ್ ನೀಡಿದಾಗ ತಲೈವಾಸ್ 6-4 ಪಾಯಿಂಟ್ಸ್ನಿಂದ ಜಯ ಸಾಧಿಸಿ ಸೆಮಿಗೆ ಲಗ್ಗೆಯಿಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.