ಚಾಂಗ್ಜು: ಭಾರತದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಸಮೀರ್ ವರ್ಮಾ, ಎಚ್.ಎಸ್.ಪ್ರಣಯ್ ಮತ್ತು ಕಿದಂಬಿ ಶ್ರೀಕಾಂತ್ ಅವರು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕಿತ ಸಿಂಧು, 22ನೇ ಶ್ರೇಯಾಂಕಿತೆ ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ಅವರನ್ನು ಕೇವಲ 39 ನಿಮಿಷಗಳಲ್ಲಿ 21–13, 21–19ರಿಂದ ಮಣಿಸಿದರು. ಇದು ಸಿಂಧುಗೆ ಮಿಯಾ ವಿರುದ್ಧದ ಎರಡನೇ ಗೆಲುವು. ಕ್ವಾರ್ಟರ್ ಫೈನಲ್ನಲ್ಲಿ ಅವರು ಚೈನಾದ ಕಾಯ್ ಯಾನ್ಯಾನ್ ಎದುರು ಸೆಣಸುವರು.
ಸೈನಾ, ಥಾಯ್ಲೆಂಡ್ನ ಪೋರ್ನಾ ಪವಿ ಚೊಚುವಾಂಗ್ ವಿರುದ್ಧ 21–16, 18–21, 21–19ರಲ್ಲಿ ಗೆದ್ದರು. ಮೊದಲ ಗೇಮ್ನಲ್ಲಿ ಸುಲಭ ಜಯ ಸಾಧಿಸಿದ ಸೈನಾಗೆ ಎರಡನೇ ಗೇಮ್ನಲ್ಲಿ ಥಾಯ್ ಆಟಗಾರ್ತಿ ತಿರುಗೇಟು ನೀಡಿದರು.
ಮೂರನೇ ಗೇಮ್ನಲ್ಲಿ ಮತ್ತೆ ಪ್ರಾಬಲ್ಯ ಮರೆದ ಸೈನಾ ಪಂದ್ಯ ಗೆದ್ದು ಸಂಭ್ರಮಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಅವರು ಜಪಾನ್ನ ನೊಜೊಮಿ ಒಕುಹರ ಅವರನ್ನು ಎದುರಿಸಲಿದ್ದಾರೆ.
ಗೆದ್ದ ಸಮೀರ್, ಶ್ರೀಕಾಂತ್, ಪ್ರಣಯ್: ಪುರುಷರಸಿಂಗಲ್ಸ್ ವಿಭಾಗ ದಲ್ಲಿ ಸಮೀರ್ ವರ್ಮಾ, ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್ ಜಯದ ಓಟ ಮುಂದುವರಿಸಿದ್ದಾರೆ. ಚೀನಾದ ಲೂ ಗ್ವಾಂಗ್ಜೂ ಅವರನ್ನು 21-15, 21-18ರಿಂದ ಸಮೀರ್ ಮಣಿಸಿದರೆ, ಥಾಯ್ಲೆಂಡ್ನ ಸಿತಿಕೊಂ ತಾಮ್ಮಸಿನ್ ಅವರನ್ನು 21–17, 21–18ರಿಂದ ಶ್ರೀಕಾಂತ್ ಸೋಲಿಸಿದರು. ಪ್ರಣಯ್ 11–21, 21–16, 21–18ರಿಂದ ಥಾಯ್ ಆಟಗಾರ ಸುಪನ್ಯು ಅವಿಹಿಂಗ್ನೊನ್ ವಿರುದ್ಧ ಗೆದ್ದರು.
ಕಶ್ಯಪ್ಗೆ ನಿರಾಸೆ: ಪರುಪಳ್ಳಿ ಕಶ್ಯಪ್ ಎರಡನೇ ಸುತ್ತಿನಲ್ಲೇ ನಿರಾಸೆ ಕಂಡು ಮರಳಿದರು.
ಚೀನಾದ ಚೆನ್ ಲಾಂಗ್ಗೆ ಅವರು 9-21 21-15 16-21ರಿಂದ ಮಣಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.