ADVERTISEMENT

‘ಗ್ರಾಮೀಣ ಆಟಗಳಿಂದ ಮಾನಸಿಕ ನೆಮ್ಮದಿ’

ಗೋದುತಾಯಿ ಪುಣ್ಯಸ್ಮರಣೆ: ಗ್ರಾಮೀಣ ಕ್ರೀಡೆಗಳಲ್ಲಿ ಮಿಂದೆದ್ದ ಅಧ್ಯಾಪಕರು, ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:16 IST
Last Updated 22 ಫೆಬ್ರುವರಿ 2020, 11:16 IST
ಕಲಬುರ್ಗಿಯಲ್ಲಿ ಗೋದುತಾಯಿ ಸ್ಮರಣೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು
ಕಲಬುರ್ಗಿಯಲ್ಲಿ ಗೋದುತಾಯಿ ಸ್ಮರಣೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು   

ಕಲಬುರ್ಗಿ: ‘ಆಟ ಆಡುವುದರಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ಸಾಧ್ಯ. ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚಾಗಿ ಆಟದಲ್ಲಿ ಪಾಲ್ಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು’ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನೀಲಾಂಬಿಕಾ ಶೇರಿಕಾರ ಸಲಹೆ ನೀಡಿದರು.

ಗೋದುತಾಯಿ ಅವ್ವಾಜಿ ಅವರ 49ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕದ ಗ್ರಾಮೀಣ ಕ್ರೀಡೆಗಳು’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‌

‘ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಜನತೆಯಲ್ಲಿ ಮಾತ್ರ ಇನ್ನೂ ಸ್ವಲ್ಪ ಉಳಿದಿದ್ದು, ನಗರ ಪ್ರದೇಶಗಳ ಜನರಿಗೂ ಅವುಗಳ ಪರಿಚಯ ಮಾಡಬೇಕಿದೆ. ಕೇವಲ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿರುವುದರಿಂದ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಮೊಬೈಲ್‍ನಲ್ಲಿ ಸಮಯ ವ್ಯರ್ಥ ಮಾಡದೇ ದೈಹಿಕವಾಗಿ ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ಸಶಕ್ತರಾಗುತ್ತಾರೆ’ ಎಂದರು.

ADVERTISEMENT

ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಡಾ.ಇಂದಿರಾ ಶೇಟಕಾರ ಮಾತನಾಡಿ, ‘ಇಂದಿನ ಒತ್ತಡ ಜೀವನದಲ್ಲಿ ಆಟಗಳಲ್ಲಿ ಮಕ್ಕಳು ಭಾಗಿಯಾಗುವುದು ಅವಶ್ಯಕ. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ’ ಎಂದರು.

ಮುಖ್ಯ ಅತಿಥಿಗಳಾಗಿದ್ದಚಿತ್ತಾಪುರದ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ,ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ದೈಹಿಕ ವಿಭಾಗದ ನಿರ್ದೇಶಕಿ ಜಾನಕಿ ಹೊಸುರ ವೇದಿಕೆಯಲ್ಲಿದ್ದರು. ಕೃಪಾಸಾಗರ ಗೊಬ್ಬುರ ಸ್ವಾಗತಿಸಿದರು. ಜಾನಕಿ ಹೊಸೂರ್‌ ಪ್ರಾಸ್ತಾವಿಕ ಮಾತನಾಡಿದರು. ಅನಿತಾ ಕೃಪಾಸಾಗರ ಗೊಬ್ಬುರ ನಿರೂಪಿಸಿದರು.

ಡಾ.ಸಿದ್ದಮ್ಮ ಗುಡೇದ, ಡಾ.ಸೀಮಾ ಪಾಟೀಲ, ಸಾವಿತ್ರಿ ಜಂಬಲದಿನ್ನಿ, ಡಾ.ಪುಟ್ಟಮಣಿ ದೇವಿದಾಸ, ಡಾ.ಎನ್.ಎಸ್.ಹೂಗಾರ, ರೇವಯ್ಯ ವಸ್ತ್ರದಮಠ, ಡಾ.ಸಂಗೀತಾ ಪಾಟೀಲ, ಪದ್ಮಜಾ ವೀರಶೆಟ್ಟಿ, ದಿಶಾ ಮೆಹತಾ, ವಿದ್ಯಾ ರೇಷ್ಮಿ, ಅನುಸೂಯ ಬಡಿಗೇರ, ಶಶಿಕಲಾ ಪಾರಾ, ಪ್ರಭಾವತಿ ಎಚ್. ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಹೇಬ್‌ ಬಿರಾದಾರ ಇದ್ದರು.

ಬಾಲ್ಯಕ್ಕೆ ಚಾರಿದ ಉಪನ್ಯಾಸಕಿಯರು:

ಗ್ರಾಮಾಂತರ ಕ್ರೀಡೆಗಳಾದ ಚಕಾರವಚ್ಚಿ, ಕುಂಟಲಿಪ್ಪಿ, ಭಾವಿ– ದಡ, ಬಳಿಚೂರಾಟ, ಸ್ಕಿಪ್ಪಿಂಗ್, ಗೋಣಿಚೀಲದಾಟ, ಚಮಚದ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ನಡೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡುವುದು ಇನ್ನಿತರ ಸ್ಪರ್ಧೆಗಳಲ್ಲಿ ನಗರ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಮಹಾವಿದ್ಯಾಲಯದ ಪ್ರಾಚಾರ್ಯರು, ಉಪನ್ಯಾಸಕರು ಸಹ ಈ ಆಟಗಳಲ್ಲಿ ಭಾಗವಹಿಸಿ ತಮ್ಮ ಬಾಲ್ಯದ ಆಟಗಳನ್ನು ನೆನೆದರು.ಗೋದುತಾಯಿ ಕಾಲೇಜಿನ ಮಹಿಳಾ ಅಧ್ಯಾಪಕರು ಇಳಕಲ್ ಸೀರೆಯಲ್ಲಿ ಕಂಗೊಳಿಸಿದರು. ಹಳ್ಳಿಯ ಸೊಗಡಿನ ಆಟಗಳಲ್ಲಿ ಯುವತಿಯರಂತೆ ಉತ್ಸಾಹದಿಂದ ಆಡಿದರು.

ಆಟಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಲಾಯಿತು. ಗೋದುತಾಯಿ ಬಿ.ಇಡಿ ವಿದ್ಯಾರ್ಥಿನಿಯರು ಸಮಗ್ರ ಪ್ರಶಸ್ತಿಗೆ ಭಾಜನರಾದರು. ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ರನ್ನರ್‌ಅಫ್ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.