ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ಅನರ್ಘ್ಯಾ, ರಕ್ಷಿತ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:23 IST
Last Updated 15 ಆಗಸ್ಟ್ 2022, 21:23 IST
ರಾಜ್ಯ ರ್‍ಯಾಂಕಿಂಗ್‌ ಟಿಟಿ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು. (ಎಡದಿಂದ) ಅನರ್ಘ್ಯಾ ಮಂಜುನಾಥ್, ಶ್ರೀಕಾಂತ್, ದೇಷ್ನಾ ವಂಶಿಕಾ, ಶ್ರೇಯಲ್‌ ತೆಲಾಂಗ್ ಮತ್ತು ರಕ್ಷಿತ್‌
ರಾಜ್ಯ ರ್‍ಯಾಂಕಿಂಗ್‌ ಟಿಟಿ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು. (ಎಡದಿಂದ) ಅನರ್ಘ್ಯಾ ಮಂಜುನಾಥ್, ಶ್ರೀಕಾಂತ್, ದೇಷ್ನಾ ವಂಶಿಕಾ, ಶ್ರೇಯಲ್‌ ತೆಲಾಂಗ್ ಮತ್ತು ರಕ್ಷಿತ್‌   

ಬೆಂಗಳೂರು: ಅನರ್ಘ್ಯಾ ಮಂಜುನಾಥ್‌ ಅವರು ಬಳ್ಳಾರಿ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ, ಪ್ರಶಸ್ತಿ ಡಬಲ್‌ ಸಾಧನೆ ಮಾಡಿದರು.

ಸೋಮವಾರ ನಡೆದ ಫೈನಲ್‌ನಲ್ಲಿ ಅನರ್ಘ್ಯಾ 9-11, 11-4, 11-8, 14-12, 11-5 ರಲ್ಲಿ ಸಹನಾ ಮೂರ್ತಿ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ಸೋತರೂ ಮರುಹೋರಾಟ ನಡೆಸುವಲ್ಲಿ ಅನರ್ಘ್ಯಾ ಯಶಸ್ವಿಯಾದರು. 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲೂ ಅವರು ಪ್ರಶಸ್ತಿ ಗೆದ್ದಿದ್ದರು.

ನಾಲ್ಕರಘಟ್ಟದ ಪಂದ್ಯಗಳಲ್ಲಿ ಅನರ್ಘ್ಯಾ 11-9, 11-3, 6-11, 11-9, 11-6 ರಲ್ಲಿ ತೃಪ್ತಿ ಪುರೋಹಿತ್‌ ವಿರುದ್ಧ; ಸಹನಾ 5-11, 15-13, 11-7, 11-5, 12-10 ರಲ್ಲಿ ದೇಷ್ನಾ ಎಂ.ವಂಶಿಕಾ ಎದುರು ಜಯಿಸಿದ್ದರು.

ADVERTISEMENT

ರಕ್ಷಿತ್‌ಗೆ ಪ್ರಶಸ್ತಿ: ಕೆನರಾ ಬ್ಯಾಂಕ್‌ನ ರಕ್ಷಿತ್ ಬಾರಿಗಿಡದ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು. ಪ್ರಬಲ ಪೈಪೋಟಿ ನಡೆದ ಫೈನಲ್‌ನಲ್ಲಿ ಅವರು 6-11, 8-11, 11-4, 11-7, 11-8, 11-2 ರಲ್ಲಿ ಕೆ.ಜೆ.ಆಕಾಶ್‌ ಎದುರು ಜಯಿಸಿದರು.

ಬಾಲಕರ 19 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದ ಆಕಾಶ್‌ ಅವರು ಮೊದಲ ಎರಡು ಗೇಮ್‌ಗಳನ್ನು ಗೆದ್ದು ಪ್ರಶಸ್ತಿ ‘ಡಬಲ್‌’ ಸಾಧನೆಯ ನಿರೀಕ್ಷೆ ಮೂಡಿಸಿದ್ದರು. ಆದರೆ ರಕ್ಷಿತ್‌ ಅದಕ್ಕೆ ಅವಕಾಶ ನೀಡಲಿಲ್ಲ. 0–2 ರಲ್ಲಿ ಹಿನ್ನಡೆಯಲ್ಲಿದ್ದರೂ, ಒತ್ತಡಕ್ಕೆ ಒಳಗಾಗದೆ ಮರುಹೋರಾಟ ನಡೆಸಿ ಪಂದ್ಯ ಗೆದ್ದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ರಕ್ಷಿತ್‌ 11-7, 11-5, 11-7, 11-8 ರಲ್ಲಿ ಅನಿರ್ಬನ್‌ ರಾಯ್‌ ಚೌಧರಿ ವಿರುದ್ಧ ಗೆದ್ದಿದ್ದರೆ, ಆಕಾಶ್‌ 13-11, 12-10, 8-11, 11-5, 11-8 ರಲ್ಲಿ ಶ್ರೀಕಾಂತ್‌ ಕಶ್ಯಪ್‌ ಅವರನ್ನು ಮಣಿಸಿದ್ದರು.

ತಂಡ ವಿಭಾಗ: ತಂಡ ವಿಭಾಗದಲ್ಲಿ ಬಿಎನ್‌ಎಂ ‘ಎ’ 2–1 ರಲ್ಲಿ ಪಿಎಸ್‌ಟಿಟಿಎ ವಿರುದ್ಧ ಜಯಿಸಿತು. ಸಿಂಗಲ್ಸ್‌ನಲ್ಲಿ ಅನಿರ್ಬನ್‌ ರಾಯ್‌ಚೌಧರಿ 11-7, 11-7, 11-9 ರಲ್ಲಿ ಶ್ರೇಯಲ್ ತೆಲಾಂಗ್‌ ಅವರನ್ನು ಸೋಲಿಸಿದರು.

ಡಬಲ್ಸ್‌ನಲ್ಲಿ ತೆಲಾಂಗ್–ಕಶ್ಯಪ್‌ ಜೋಡಿ 11-3, 11-8, 11-8 ರಲ್ಲಿ ಅನಿರ್ಬನ್‌– ಅನರ್ಘ್ಯಾ ಎದುರು ಗೆದ್ದಿತು. ಇನ್ನೊಂದು ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಕಶ್ಯಪ್ 11-8, 11-5, 11-7 ರಲ್ಲಿ ಯಶವಂತ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.